ಬಳ್ಳಾರಿ: ಸೆ.1ರಂದು ಪ್ರಾರಂಭವಾದ ನಮ್ಮ ಈ ಪಾದಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ರೈತರು, ಯುವಕರು ಮತ್ತು ಜನಸಾಮಾನ್ಯರ ಸಹಕಾರದಿಂದ ಇದು ಅಂತಿಮ ಘಟ್ಟಕ್ಕೆ ಬಂದು ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಇಂದು ಸುಮಾರು 2 ಕಿ.ಮೀ ಸಾಗಿ ಬಳ್ಳಾರಿಯ ವಾಲ್ಮೀಕಿ ವೃತ್ತವನ್ನು ತಲುಪಲಿದ್ದೇವೆ ಎಂದು ವಿವರಿಸಿದರು. ಇದು ಜನರಲ್ಲಿ ಹೊಸ ಆಶಾಭಾವನೆಯನ್ನು ಹುಟ್ಟುಹಾಕಿದೆ ಹಾಗೂ ಮುಂದಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರವನ್ನು ತರುವ ನಿಟ್ಟಿನಲ್ಲಿ ಭದ್ರ ಬುನಾದಿ ಹಾಕಿದೆ ಎಂದು ವಿಶ್ವಾಸದಿಂದ ನುಡಿದರು. ರಾಜ್ಯವು ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು.
ಸಂಜೆ ಬೃಹತ್ ಸಮಾವೇಶ
ನಾಳೆ ಬೆಳಿಗ್ಗೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಲಿದ್ದೇವೆ. ಸಂಜೆ ಉಳಿದಿರುವ 2.5 ರಿಂದ 3 ಕಿ.ಮೀ ಪಾದಯಾತ್ರೆ ಪ್ರಾರಂಭ ಆಗಲಿದೆ. ಸಂಜೆ 4:30 ಗಂಟೆಗೆ ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗುವುದು. ಈ ಬೃಹತ್ ಸಮಾವೇಶದಲ್ಲಿ ಕನಿಷ್ಠ 45,000 ದಿಂದ 50,000 ಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ವಿವರ ನೀಡಿದರು.
ಭಾಗವಹಿಸಲಿರುವ ಪ್ರಮುಖ ನಾಯಕರು
ಈ ಸಮಾವೇಶದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದ ಅವರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ರಾಜ್ಯದ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ರಾಜ್ಯದ ಸಂಸದರು, ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಮಾಜಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವೈಯಕ್ತಿಕ ತೃಪ್ತಿ ತಂದಿದೆ
ನನ್ನ ರಾಜಕೀಯ ಜೀವನದಲ್ಲಿ ಇದೊಂದು ಮಹತ್ತರವಾದ ತಿರುವು ಹಾಗೂ ಮರೆಯಲಾಗದ ಹೋರಾಟ. ದಾರಿಯುದ್ದಕ್ಕೂ ರೈತರು, ಯುವಕರು, ಕುರಿಗಾಹಿಗಳು, ಅಲೆಮಾರಿ ಸಮುದಾಯದವರು ಹೀಗೆ ಎಲ್ಲರೊಂದಿಗೂ ಸಂವಾದ ನಡೆಸಿದ್ದು ನನಗೆ ತೃಪ್ತಿ ತಂದಿದೆ ಎಂದು ಅವರು ಹೇಳಿದರು.
ಸಮಾವೇಶಕ್ಕೆ ಕೇಂದ್ರ ಸಚಿವರು ಏಕೆ ಬರುತ್ತಿಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾಳಿನ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಖಂಡಿತವಾಗಿಯೂ ಆಗಮಿಸುತ್ತಿದ್ದಾರೆ ಎಂದು ನುಡಿದರು.
ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕಿವುಡರಂತೆ ವರ್ತನೆ
ರಾತ್ರೋರಾತ್ರಿ ನಿಮ್ಮ ಬ್ಯಾನರ್ಗಳನ್ನು ಹರಿದು ಹಾಕಿರುವ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಎಂಬ ಪ್ರಶ್ನೆಗೆ ಉತ್ತರ ನೀಡಿ, ರಾಜ್ಯ ಸರ್ಕಾರವು ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕಿವುಡರಂತೆ ವರ್ತಿಸುತ್ತಿದೆ. ರಾತ್ರೋರಾತ್ರಿ ನಮ್ಮ ಬ್ಯಾನರ್ ಮತ್ತು ಬಾವುಟಗಳನ್ನು ಹರಿದು ಹಾಕಲಾಗಿದೆ. ರಕ್ಷಣೆ ಕೊಡಬೇಕಾದ ಪೆÇಲೀಸರೇ ನಮ್ಮ ಹೋರಾಟಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕಾನೂನು ಬಾಹಿರವಾಗಿ ನಾವು ಏನನ್ನೂ ಮಾಡುತ್ತಿಲ್ಲ, ಆದರೂ ಸರ್ಕಾರ ಈ ರೀತಿ ಮಾಡುತ್ತಿರುವುದು ಖಂಡನೀಯ ಎಂದು ತಿಳಿಸಿದರು.
ಕಾರ್ಯಕರ್ತರಲ್ಲಿ ರಣೋತ್ಸಾಹ
2028ರ ಚುನಾವಣೆಯನ್ನು ಯಾರ ನೇತೃತ್ವದಲ್ಲಿ ಎದುರಿಸುತ್ತೀರಿ? ಎಂದು ಕೇಳಿದಾಗ, ರಾಜ್ಯದಲ್ಲಿರುವ ಎಲ್ಲಾ ಹಿರಿಯ ನಾಯಕರ ಒಗ್ಗಟ್ಟಿನ ನೇತೃತ್ವದಲ್ಲಿ ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿ ಜೀ, ನಿತಿನ್ ನವೀನ್ ಮತ್ತು ಅಮಿತ್ ಶಾ ಜೀ ಅವರ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಾರ್ಟಿ ಮುಂಬರುವ ಚುನಾವಣೆಯನ್ನು ಎದುರಿಸಲಿದೆ ಎಂದು ಹೇಳಿದರು. ಕಾರ್ಯಕರ್ತರಲ್ಲಿ ರಣೋತ್ಸಾಹ ಇದೆ. ಹೋರಾಟ ಅಂತ್ಯವಲ್ಲ; ಇದು ಆರಂಭ ಎಂದರು.
ನವಲಿ ಜಲಾಶಯದ ವಿಚಾರದಲ್ಲಿ ನಿಮ್ಮ ನಿಲುವೇನು? ಎಂದು ಕೇಳಿದರು. ಈ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನವಲಿ ಜಲಾಶಯ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಬದ್ಧತೆ ಇದೆ. ಈ ಬಗ್ಗೆ ಸದನದ ಒಳಗೂ ನಾವು ಧ್ವನಿ ಎತ್ತಿ ಹೋರಾಟ ಮಾಡುತ್ತೇವೆ ಎಂದು ನುಡಿದರು.
ಹೋರಾಟಕ್ಕೆ ಅಡಚಣೆ ಮಾಡದಿರಿ..
ಕಾನೂನಿನ ಕಥೆ ಹೇಳಿ ನಮ್ಮ ಹೋರಾಟಕ್ಕೆ ಸರಕಾರ ಅಡಚಣೆ ಮಾಡಬಾರದು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.ಸರಕಾರ ತೀವ್ರವಾಗಿ ವಿಚಲಿತವಾಗಿದೆ. ರಾತ್ರೋರಾತ್ರಿ ನಮ್ಮ ಬಾವುಟ, ಬ್ಯಾನರ್ಗಳನ್ನು ಹರಿದು ಹಾಕಿದ್ದಾರೆ ಎಂದು ಟೀಕಿಸಿದರು.
ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ..
ಕಾಂಗ್ರೆಸ್ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯದ (ಇಡಿ) ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ನಾವು ಬೂಟಾಟಿಕೆಗಾಗಿ ಪಾದಯಾತ್ರೆ ಮಾಡಿಲ್ಲ. ಜನರ ಸಮಸ್ಯೆಗಳಿಗೆ ಧ್ವನಿಯಾಗಲು, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ರೈತರು, ಯುವಕರು ಹಾಗೂ ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಲು ಈ ಹೋರಾಟ ನಡೆಸಿದ್ದೇವೆ’ ಎಂದು ಹೇಳಿದರು.
ಮಾಜಿ ಸಚಿವ ನಾಗೇಂದ್ರ ಅವರ ವಿಚಾರದಲ್ಲೂ ಇದೇ ರೀತಿಯ ಆರೋಪಗಳನ್ನು ಮಾಡಲಾಗಿತ್ತು. ಕೆಲ ಸಚಿವರು ಬಿಜೆಪಿ ಹಿಟ್ಲಿಸ್ಟ್ನಲ್ಲಿ, ಕೆಲ ಸಚಿವರು ಕಾಂಗ್ರೆಸ್ ಹಿಟ್ಲಿಸ್ಟ್ನಲ್ಲಿ ಇದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಬಿಜೆಪಿಯ ಹೋರಾಟ ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡದ್ದಲ್ಲ; ಜನರ ಪರವಾದ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಜನರ ಧ್ವನಿಯಾಗಿ ಹೋರಾಟ..
‘ಬಳ್ಳಾರಿ ಚಲೋ’ ನಾಳೆಗೆ ಮುಕ್ತಾಯವಾದರೂ, ಜನರ ಧ್ವನಿಯಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ರಾಜ್ಯದ ಜನರ ಆಶಾಭಾವನೆಗೆ ತಕ್ಕಂತೆ ಜನಪರ ಸರ್ಕಾರಕ್ಕಾಗಿ ಬಿಜೆಪಿ ನಿರಂತರವಾಗಿ ಹೋರಾಟ ನಡೆಸಲಿದೆ’ ಎಂದು ಹೇಳಿದರು.