ಬಳ್ಳಾರಿ: ಸಂಬಂಧಿಯಾಗಿರುವ ವಿವಾಹಿತೆಗೆ ಜಾಲತಾಣದಲ್ಲಿ ಅಸಭ್ಯ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಸಂಚು ರೂಪಿಸಿ ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿದ ಘಟನೆ ಬಳ್ಳಾರಿಯ ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಳ್ಳಾರಿಯ ಬಸವನಗೌಡ ಪಾಟೀಲ್(26) ಕೊಲೆಯಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಂಬಂಧಿ ಶ್ವೇತಾ, ಆಕೆಯ ಪತಿ ದೊಡ್ಡಬಸವನಗೌಡ ಮತ್ತು ಸಹೋದರ ವಿಜಯ್ ಎಂಬವರನ್ನು ಮೋಕಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿಯ ವೈದ್ಯಕೀಯ ಲ್ಯಾಬ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಸವನಗೌಡ ಪಾಟೀಲ್ ತನ್ನ ಸಹೋದರನ ಪತ್ನಿಯ ಸಹೋದರಿಯಾದ ಶ್ವೇತಾಗೆ ಹಲವು ತಿಂಗಳುಗಳಿಂದ ಅಸಭ್ಯ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳದಿಂದ ಬೇಸತ್ತ ಶ್ವೇತಾ ಪತಿಗೆ ವಿಷಯ ತಿಳಿಸಿದ್ದರು.
ನಂತರ ಬಸನಗೌಡನ ವಿಕೃತಿಗೆ ಅಂತ್ಯ ಹಾಡಲು ನಿರ್ಧರಿಸಿದ ಮೂವರು ಸಂಚು ರೂಪಿಸಿ ಆತನನ್ನು ಕರೆ ಮಾಡಿ ಕರೆಸಿಕೊಂಡಿದ್ದಾರೆ. ಕೊಲೆ ಮಾಡಿ 10 ಕಿಲೋಮೀಟರ್ ದೂರದಲ್ಲಿ ಮೃತದೇಹ ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ತನಿಖೆ ಕೈಗೊಂಡ ಪೊಲೀಸರು ಮೃತನ ಮೊಬೈಲ್ ಕರೆ ಮತ್ತು ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ.