ನಿನ್ನೆ ( ಜೂನ್ 15 ) ಡಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡು ಸೂಪರ್ ಓವರ್ ನಡೆಯಿತು. ಈ ರೋಚಕ ಪಂದ್ಯದಲ್ಲಿ ಶ್ರೀಲಂಕಾ ಎ ತಂಡ ಗೆದ್ದುಬೀಗಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.2 ಓವರ್ಗಳಲ್ಲಿ 265 ರನ್ಗಳಿಗೆ ಆಲ್ಔಟ್ ಆಗಿ ಭಾರತ ತಂಡಕ್ಕೆ 266 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಶ್ರೀಲಂಕಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಈ ಮೂಲಕ ಪಂದ್ಯ ಡ್ರಾ ಆಯಿತು.
ಬಳಿಕ ನಡೆದ ಸೂಪರ್ ಓವರ್ನಲ್ಲಿ ಶ್ರೀಲಂಕಾ 16 ರನ್ ಬಾರಿಸಿ ಭಾರತಕ್ಕೆ 17 ರನ್ಗಳ ಸವಾಲಿನ ಗುರಿಯನ್ನು ನೀಡಿತು. ಆದರೆ ಭಾರತ ಕೇವಲ 9 ರನ್ ಕಲೆಹಾಕಿ 7 ರನ್ಗಳ ಹೀನಾಯ ಸೋಲನ್ನು ಅನುಭವಿಸಿತು.
ಲಂಕಾ ಸೂಪರ್ ಓವರ್ನಲ್ಲಿ ನೀಡಿದ ಗುರಿ ಬೆನ್ನಟ್ಟಿದ ಭಾರತದ ಪರ ಸೂರ್ಯನ್ಶ್ ಶೆಡ್ಗೆ ಹಾಗೂ ವೈಭವ್ ಸೂರ್ಯವಂಶಿ ಕಣಕ್ಕಿಳಿದರು. ಮೊದಲ ಎಸೆತಕ್ಕೆ ಎರಡು ರನ್ ಬಾರಿಸಿ ಎರಡನೇ ಎಸೆತ ನುಂಗಿದ ಶೆಡ್ಗೆ ಮೂರನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ನಂತರ ವೈಭವ್ ಸೂರ್ಯವಂಶಿ ನಾಲ್ಕನೇ ಎಸೆತದಲ್ಲಿ ಎರಡು ರನ್, ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿ ಕೊನೆಯ ಎಸೆತದಲ್ಲಿ ರನ್ ಬಾರಿಸಲಾಗದೇ ಓವರ್ ಮುಗಿಸಿದರು.
ಹೀಗೆ ಪಂದ್ಯ ಸೋತು ಶೆಡ್ಗೆ ಹಾಗೂ ವೈಭವ್ ಪೆವಿಲಿಯನ್ನತ್ತ ಹೆಜ್ಜೆ ಹಾಕಲು ಮುಂದಾದರು. ಈ ಸಮಯದಲ್ಲಿ ಶ್ರೀಲಂಕಾ ಆಟಗಾರರು ಪಂದ್ಯ ಗೆದ್ದ ಖುಷಿಯಲ್ಲಿ ಕಿರುಚಿ ಸಂಭ್ರಮಿಸಿದರು. ಇದಕ್ಕೆ ಪ್ರತಿಕ್ರಿಯಿಸಲು ಮುಂದಾದ ವೈಭವ್ ಶ್ರೀಲಂಕಾ ಆಟಗಾರರ ವಿರುದ್ಧ ಕಿಡಿಕಾರಿ ಅವರ ಬಳಿ ತೆರಳಿ ಸೂಪರ್ ಓವರ್ ಮಾಡಿದ ಕುಗದಾಸ್ ಮಧುಲನ್ ಎದೆ ಮೇಲೆ ಕೈ ಹಾಕಿ ತಳ್ಳಿ ಹಲ್ಲೆ ಯತ್ನ ಮಾಡಿದರು. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ಸೂಪರ್ ಓವರ್ನಲ್ಲಿ ಚೆನ್ನಾಗಿ ಆಡಿ ತಂಡ ಗೆಲ್ಲಿಸದೇ ಹೀಗೆ ಹಲ್ಲೆ ಮಾಡಲು ಮುಂದಾದರೆ ಏನು ಪ್ರಯೋಜನ ಎಂಬ ಕಾಮೆಂಟ್ ಕೇಳಿಬರುತ್ತಿವೆ.