ಜೂನ್ 15ರಂದು ಡಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡು ಸೂಪರ್ ಓವರ್ ನಡೆಯಿತು. ಈ ರೋಚಕ ಪಂದ್ಯದಲ್ಲಿ ಶ್ರೀಲಂಕಾ ಎ ತಂಡ ಗೆದ್ದುಬೀಗಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.2 ಓವರ್ಗಳಲ್ಲಿ 265 ರನ್ಗಳಿಗೆ ಆಲ್ಔಟ್ ಆಗಿ ಭಾರತ ತಂಡಕ್ಕೆ 266 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಶ್ರೀಲಂಕಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಈ ಮೂಲಕ ಪಂದ್ಯ ಡ್ರಾ ಆಯಿತು.
ಬಳಿಕ ನಡೆದ ಸೂಪರ್ ಓವರ್ನಲ್ಲಿ ಶ್ರೀಲಂಕಾ 16 ರನ್ ಬಾರಿಸಿ ಭಾರತಕ್ಕೆ 17 ರನ್ಗಳ ಸವಾಲಿನ ಗುರಿಯನ್ನು ನೀಡಿತು. ಆದರೆ ಭಾರತ ಕೇವಲ 9 ರನ್ ಕಲೆಹಾಕಿ 7 ರನ್ಗಳ ಹೀನಾಯ ಸೋಲನ್ನು ಅನುಭವಿಸಿತು.
ಲಂಕಾ ಸೂಪರ್ ಓವರ್ನಲ್ಲಿ ನೀಡಿದ ಗುರಿ ಬೆನ್ನಟ್ಟಿದ ಭಾರತದ ಪರ ಸೂರ್ಯನ್ಶ್ ಶೆಡ್ಗೆ ಹಾಗೂ ವೈಭವ್ ಸೂರ್ಯವಂಶಿ ಕಣಕ್ಕಿಳಿದರು. ಮೊದಲ ಎಸೆತಕ್ಕೆ ಎರಡು ರನ್ ಬಾರಿಸಿ ಎರಡನೇ ಎಸೆತ ನುಂಗಿದ ಶೆಡ್ಗೆ ಮೂರನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ನಂತರ ವೈಭವ್ ಸೂರ್ಯವಂಶಿ ನಾಲ್ಕನೇ ಎಸೆತದಲ್ಲಿ ಎರಡು ರನ್, ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿ ಕೊನೆಯ ಎಸೆತದಲ್ಲಿ ರನ್ ಬಾರಿಸಲಾಗದೇ ಓವರ್ ಮುಗಿಸಿದರು.
ಹೀಗೆ ಪಂದ್ಯ ಸೋತು ಶೆಡ್ಗೆ ಹಾಗೂ ವೈಭವ್ ಪೆವಿಲಿಯನ್ನತ್ತ ಹೆಜ್ಜೆ ಹಾಕಲು ಮುಂದಾದಾಗ ಶ್ರೀಲಂಕಾ ಆಟಗಾರರು ಸಂಭ್ರಮಾಚರಣೆ ಮಾಡುತ್ತಿದ್ದರು. ಆ ಸಮಯದಲ್ಲಿ ಶ್ರೀಲಂಕಾದ ಆಟಗಾರ ಪ್ರಚೋದಿಸುವ ಮಾತುಗಳನ್ನಾಡಿದರು ಎಂಬ ಕಾರಣಕ್ಕೆ ವೈಭವ್ ಸೂರ್ಯವಂಶಿ ತಾಳ್ಮೆ ಕಳೆದುಕೊಂಡು ಆ ಆಟಗಾರನತ್ತ ಸಾಗಿ ಕೈನಿಂದ ತಳ್ಳಿ ಹಲ್ಲೆ ಯತ್ನ ಮಾಡಿದ್ದರು.
ಈ ಘಟನೆ ಕ್ರಿಕೆಟ್ ಲೋಕದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿತ್ತು. ವೈಭವ್ ಸೂರ್ಯವಂಶಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಹಲವಾರು ಮಂದಿ ಎದುರಾಳಿ ಆಟಗಾರರು ಏನೇ ಹೇಳಲಿ, ಅದಕ್ಕೆ ಕೈ ಎತ್ತುವ ಅಗತ್ಯವೇನಿದೆ, ಚಿಕ್ಕ ಹುಡುಗ ವೈಭವ್ಗೆ ಸರಿಯಾದ ಬುದ್ದಿವಾದದ ಅವಶ್ಯಕತೆ ಇದೆ ಎಂದಿದ್ದರು.
ಈ ಕುರಿತು ಸದ್ಯ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಟ್ವೀಟ್ ಮಾಡಿದ್ದು, ‘ನಾನೇನಾದರೂ ಭಾರತ ಎ ತಂಡದ ಕೋಚ್ ಅಥವಾ ಮ್ಯಾನೇಜರ್ ಆಗಿದ್ದರೆ ಇಂದು ಅಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ ಪಂದ್ಯದಿಂದ ಆತನನ್ನು ಹೊರಹಾಕುತ್ತಿದ್ದೆ. ಎದುರಾಳಿಗಳು ಏನೇ ಪ್ರಚೋದನೆ ಮಾಡಲಿ, ಮೈದಾನದಲ್ಲಿ ಕೈ ಮಾಡಲು ಮುಂದಾಗುವುದು ಸರಿಯಲ್ಲ ಎಂಬುದು ಆತನಿಗೆ ಅರ್ಥವಾಗಲಿ ಎಂಬುದು ನನ್ನ ಉದ್ದೇಶ’ ಎಂದು ಬರೆದುಕೊಂಡಿದ್ದಾರೆ.