ಉತ್ತರ ಪ್ರದೇಶ: ಇಡೀ ಉತ್ತರ ಪ್ರದೇಶದಲ್ಲೇ ಸಂಚಲನ ಸೃಷ್ಟಿಸಿದ್ದ ಔಷಧ ವ್ಯಾಪಾರಿಯ ಮಗ ಆಯುಷ್ ಮಲಿಕ್ ಮತಾಂತರ ಪ್ರಕರಣಕ್ಕೆ ಈಗ ಅತ್ಯಂತ ನಾಟಕೀಯ ತಿರುವು ಸಿಕ್ಕಿದೆ. ಮುಸ್ಲಿಂ ಯುವತಿಯ ಪ್ರೇಮದ ಜಾಲಕ್ಕೆ ಬಿದ್ದು, ಅಲಿ ಮೊಹಮ್ಮದ್ ಆಗಿ ಬದಲಾಗಿದ್ದ ಆಯುಷ್ ಮಲಿಕ್, ಸೋಮವಾರ ಸಂಜೆ ಮತ್ತೆ ಹಿಂದೂ ಧರ್ಮಕ್ಕೆ (ಘರ್ ವಾಪ್ಸಿ) ಮರಳಿದ್ದಾನೆ. ಮನೆಯ ದೇವಸ್ಥಾನದಲ್ಲಿ ಗಾಯತ್ರಿ ಮಂತ್ರದ ಘೋಷಗಳ ನಡುವೆ ಹನುಮಂತನಿಗೆ ಪೂಜೆ ಸಲ್ಲಿಸಿ, ಪೋಷಕರ ಪಾದ ಮುಟ್ಟಿ ಆಶೀರ್ವಾದ ಪಡೆದಿರುವ ಆಯುಷ್ನ 2 ನಿಮಿಷ 17 ಸೆಕೆಂಡುಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೋಟ್ಯಾಧಿಪತಿಯ ಮಗನನ್ನೇ ಟಾರ್ಗೆಟ್ ಮಾಡಿದ್ದ ಚಾಣಾಕ್ಷ ಜಾಲ
ಪೊಲೀಸ್ ತನಿಖೆಯಿಂದ ಹೊರಬಿದ್ದಿರುವ ಮಾಹಿತಿಗಳನ್ನು ನೋಡಿದರೆ ಇದು ಕೇವಲ ಪ್ರೇಮ ವಿವಾಹದ ಕಥೆಯಲ್ಲ, ಬದಲಿಗೆ ಆಸ್ತಿ ಕಬಳಿಸಲು ಹೆಣೆದಿದ್ದ ಒಂದು ವ್ಯವಸ್ಥಿತ ಸಂಚು ಎಂಬುದು ಸ್ಪಷ್ಟವಾಗುತ್ತದೆ.
ಜಿಮ್ ಟ್ರೈನರ್ ರೂಪದಲ್ಲಿ ಬಂದ ಚಾಂದನಿ: ಆಯುಷ್ ಮಲಿಕ್ ವಿದ್ಯಾಭ್ಯಾಸ ಮುಗಿಸಿ ಭಾರತ್ ಮೆಡಿಕೋಸ್ ಎಂಬ ವೈದ್ಯಕೀಯ ಅಂಗಡಿ ತೆರೆದಿದ್ದನು. ಅಲ್ಲಿ ಕೆಲಸಕ್ಕಿದ್ದ ಆಸ್ ಮೊಹಮ್ಮದ್ ಅಲಿಯಾಸ್ ಆಶು ಎಂಬಾತನಿಗೆ ಆಯುಷ್ ಕೋಟ್ಯಾಧಿಪತಿ ಎಂಬ ವಿಷಯ ಗೊತ್ತಿತ್ತು. ತನ್ನ ಯಜಮಾನನನ್ನೇ ಬಲೆಗೆ ಬೀಳಿಸಲು ಆಶು ತನ್ನ ಸಹೋದರಿ ಚಾಂದನಿ ಖುರೇಷಿಯನ್ನು ಬಳಸಿಕೊಂಡಿದ್ದಾನೆ. ಆಯುಷ್ ಹೋಗುತ್ತಿದ್ದ ಜಿಮ್ಗೇ ಚಾಂದನಿ ಜಿಮ್ ಟ್ರೈನರ್ ಆಗಿ ಸೇರಿದಳು.
ಬ್ಲಾಕ್ಮೇಲ್ ಮತ್ತು ಬ್ರೈನ್ವಾಶ್: ತರಬೇತಿಯ ನೆಪದಲ್ಲಿ ಆಯುಷ್ನನ್ನು ಆಕರ್ಷಿಸಿದ ಚಾಂದನಿ, ಆತನ ಕೆಲವು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದಳು. ನಂತರ ಪಾಕಿಸ್ತಾನಿ ಮೂಲಭೂತವಾದಿ ಡಾ. ಇಸ್ರಾರ್ ಅಹ್ಮದ್ನ ಧಾರ್ಮಿಕ ವೀಡಿಯೊಗಳನ್ನು ತೋರಿಸಿ ಆತನನ್ನು ಸಂಪೂರ್ಣವಾಗಿ ಬ್ರೈನ್ವಾಶ್ ಮಾಡಲಾಗಿತ್ತು.
ದೆಹಲಿಯ ಮಸೀದಿಯಲ್ಲಿ ಬಲವಂತದ ನಿಕಾಹ್: ಯುವಕನ ಮಾನಸಿಕ ಸಮತೋಲನ ಹದಗೆಟ್ಟ ತಕ್ಷಣ, ಆರೋಪಿಗಳು ಆತನನ್ನು ದೆಹಲಿಗೆ ಕರೆದೊಯ್ದು ಗಾಜಿಯಾಬಾದ್ ಮತ್ತು ಶಾಮ್ಲಿಯ ಮೂವರು ಮೌಲಾನಾಗಳ ಸಮ್ಮುಖದಲ್ಲಿ ಬಲವಂತವಾಗಿ ಮತಾಂತರ ಮಾಡಿ ಚಾಂದನಿ ಜೊತೆ ನಿಕಾಹ್ ಮಾಡಿಸಿದ್ದರು. ಮದುವೆಯ ನಂತರವೂ ಆತನಿಂದ ನಿರಂತರವಾಗಿ ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡಲಾಗುತ್ತಿತ್ತು.
ಸ್ವಾಮಿ ಯಶ್ವೀರ್ ಎತ್ತಿದ ಧ್ವನಿ, ಜೂನ್ 6 ರಂದು ದಾಖಲಾದ ಎಫ್ಐಆರ್
ಈ ಇಡೀ ದಂದೆಯನ್ನು ಮೊದಲು ಬಹಿರಂಗಪಡಿಸಿದ್ದು ಹಿಂದೂ ಧರ್ಮಗುರು ಸ್ವಾಮಿ ಯಶ್ವೀರ್. ಜೂನ್ 4 ರಂದು ಅವರು ವಿಡಿಯೋ ಬಿಡುಗಡೆ ಮಾಡಿ ಜಿಲ್ಲಾಡಳಿತದ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಆಯುಷ್ ತಂದೆ ದೇವರಾಜ್ ಮಲಿಕ್, ಜೂನ್ 6 ರಂದು ಚಾಂದನಿ ಖುರೇಷಿ, ಆಕೆಯ ಕುಟುಂಬದ 7 ಸದಸ್ಯರು ಹಾಗೂ 3 ಮೌಲಾನಾಗಳ ವಿರುದ್ಧ ಶಾಮ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತಮಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ಪೊಲೀಸ್ ಆಕ್ಷನ್: ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಒಟ್ಟು 10 ಜನರ ವಿರುದ್ಧ ಕೇಸ್ ಜಾರ್ಜ್ ಮಾಡಿ, ಈಗಾಗಲೇ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಕುಟುಂಬದ ಹಿತದೃಷ್ಟಿಯಿಂದ ಮತಾಂತರಗೊಂಡಿದ್ದೆ: ಪಶ್ಚಾತ್ತಾಪ ಪಟ್ಟ ಆಯುಷ್
ಸೋಮವಾರ ಸಂಜೆ ಬಿಡುಗಡೆಯಾಗಿರುವ ಹೊಸ ವಿಡಿಯೋದಲ್ಲಿ ಆಯುಷ್ ಮಲಿಕ್ ತನ್ನ ತಂದೆ ಮತ್ತು ಕುಟುಂಬದ ಸುರಕ್ಷತೆಯ ಹಿತದೃಷ್ಟಿಯಿಂದ ತಾನು ಇಸ್ಲಾಂಗೆ ಮತಾಂತರಗೊಳ್ಳಬೇಕಾಯಿತು ಎಂದು ಒಪ್ಪಿಕೊಂಡಿದ್ದಾನೆ. “ನಾನು ಇನ್ಮುಂದೆ ಶಾಶ್ವತವಾಗಿ ಹಿಂದೂವಾಗಿಯೇ ಇರುತ್ತೇನೆ” ಎಂದು ಹೇಳುತ್ತಾ ಹೆತ್ತವರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾನೆ.
ಆಯುಷ್ ತಂದೆ ದೇವರಾಜ್ ಮಲಿಕ್ ಈ ವಿಡಿಯೋದ ಸತ್ಯಾಸತ್ಯತೆಯನ್ನು ಖಚಿತಪಡಿಸಿದ್ದು, ಮಗ ಸನಾತನ ಧರ್ಮಕ್ಕೆ ಮರಳಿದ್ದಾನೆ ಎಂದು ಹೇಳಿದ್ದಾರೆ. ಸದ್ಯ ಆಯುಷ್ನನ್ನು ಸುರಕ್ಷಿತವಾಗಿ ಬೇರೆಡೆ ಇರಿಸಲಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಶಾಮ್ಲಿ ಎಸ್ಪಿ ಎನ್.ಪಿ. ಸಿಂಗ್, “ಆಯುಷ್ ಮತಾಂತರ ಹಾಗೂ ವಾಪಸಾತಿಯ ಬಗ್ಗೆ ಸದ್ಯಕ್ಕೆ ಅವರ ಕುಟುಂಬದವರೇ ಮಾಹಿತಿ ನೀಡಬೇಕಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಶೀಘ್ರದಲ್ಲೇ ಎಲ್ಲರನ್ನೂ ಬಂಧಿಸಲಾಗುವುದು” ಎಂದು ತಿಳಿಸಿದ್ದಾರೆ.ಸ್ವಾಮಿ ಯಶ್ವೀರ್ ಅವರು ಈ ಯಶಸ್ವಿ ಘರ್ ವಾಪ್ಸಿಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಶಾಮ್ಲಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.