ಬೆಂಗಳೂರು: ನ್ಯಾಯಾಲಯಗಳಲ್ಲಿ ಸರ್ಕಾರದ ಪರವಾಗಿ ನಡೆಯುವ ವಿವಿಧ ಮೊಕದ್ದಮೆಗಳಲ್ಲಿ ಸರ್ಕಾರದ ನಿಲುವು ಹಾಗೂ ಹಿತಾಸಕ್ತಿಯನ್ನು ಸಮರ್ಥವಾಗಿ ರಕ್ಷಿಸುವ ನಿಟ್ಟಿನಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವ್ಯವಸ್ಥೆಯಲ್ಲಿನ ಲೋಪಗಳು, ಅಗತ್ಯ ಮಾಹಿತಿಯ ಕೊರತೆ ಅಥವಾ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಯಾವುದೇ ಸರ್ಕಾರದ ಪ್ರಕರಣ ನ್ಯಾಯಾಲಯದಲ್ಲಿ ದುರ್ಬಲವಾಗಬಾರದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಆರಂಭದಿಂದಲೇ ಇಲಾಖೆಗಳ ಸಮನ್ವಯ ಅಗತ್ಯ
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಸರ್ಕಾರದ ಪ್ರಕರಣಗಳು ಕೇವಲ ನ್ಯಾಯಾಲಯದಲ್ಲಿ ವಾದ ಮಂಡಿಸುವ ಹಂತಕ್ಕೆ ಸೀಮಿತವಾಗಬಾರದು. ಪ್ರಕರಣದ ಆರಂಭಿಕ ಹಂತದಿಂದಲೇ ಸಂಬಂಧಿಸಿದ ಇಲಾಖೆಗಳು, ತನಿಖಾಧಿಕಾರಿಗಳು ಹಾಗೂ ಸರ್ಕಾರಿ ವಕೀಲರ ನಡುವೆ ನಿರಂತರ ಸಮನ್ವಯ ಇರಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳು ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ಸಮಗ್ರ ದಾಖಲೆಗಳು, ಆದೇಶಗಳು ಹಾಗೂ ಇಲಾಖೆಯ ನಿಲುವನ್ನು ಅಭಿಯೋಗ ಇಲಾಖೆಗೆ ಕಾಲಮಿತಿಯಲ್ಲಿ ಒದಗಿಸಬೇಕು. ಸಂಪೂರ್ಣ ಮಾಹಿತಿ ಲಭ್ಯವಿದ್ದಾಗ ಮಾತ್ರ ಸರ್ಕಾರಿ ವಕೀಲರು ಪ್ರಬಲ ವಾದ ಮಂಡಿಸಲು ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಪ್ರಕರಣಗಳ ನಿರ್ವಹಣೆಗೆ ತಂತ್ರಜ್ಞಾನದ ಬಳಕೆ
ನ್ಯಾಯಾಲಯದ ವ್ಯಾಜ್ಯಗಳನ್ನು ಎದುರಿಸುವ ಪ್ರಕ್ರಿಯೆಯನ್ನು ಇನ್ನಷ್ಟು ದಕ್ಷಗೊಳಿಸಲು ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು. ಪ್ರಕರಣಗಳ ಮಾಹಿತಿ, ದಾಖಲೆಗಳ ನಿರ್ವಹಣೆ, ಪ್ರಗತಿ ಹಾಗೂ ನ್ಯಾಯಾಲಯದ ಆದೇಶಗಳನ್ನು ವ್ಯವಸ್ಥಿತವಾಗಿ ಡಿಜಿಟಲೀಕರಣಗೊಳಿಸಬೇಕು. ಇದರಿಂದ ಸರ್ಕಾರಿ ವಕೀಲರಿಗೆ ಪ್ರಕರಣದ ಸಂಪೂರ್ಣ ವಿವರಗಳು ತ್ವರಿತವಾಗಿ ಲಭ್ಯವಾಗುವುದರ ಜೊತೆಗೆ ಪ್ರಕರಣಗಳ ಮೇಲ್ವಿಚಾರಣೆ ಸುಲಭವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ವಿಶೇಷ ಪ್ರಕರಣಗಳಿಗೆ ಆದ್ಯತೆ ಹಾಗೂ ಶಿಕ್ಷೆಯ ಪ್ರಮಾಣ
ರಾಜ್ಯದ 8 ವಿಭಾಗಗಳಲ್ಲಿ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಬೆಳಗಾವಿ, ಕಲಬುರಗಿ ಹಾಗೂ ಬಳ್ಳಾರಿ) ಕಾರ್ಯನಿರ್ವಹಿಸುತ್ತಿರುವ ಇಲಾಖೆಯು ಜೂನ್ 2026ರ ಅವಧಿಯಲ್ಲಿ ಒಟ್ಟು 14,320 ಪ್ರಕರಣಗಳನ್ನು ವಿಲೇವಾರಿ ಮಾಡಿದೆ. ಇದರಲ್ಲಿ ಎನ್.ಡಿ.ಪಿ.ಎಸ್. ಪ್ರಕರಣಗಳಲ್ಲಿ ಶೇ. 40.74 ಹಾಗೂ ವಿದ್ಯುತ್ ಕಾಯ್ದೆಯಡಿ ಶೇ. 50ರಷ್ಟು ಶಿಕ್ಷೆ ಪ್ರಮಾಣ ದಾಖಲಾಗಿದೆ.
ಇದೇ ವೇಳೆ, ಎಸ್.ಸಿ./ಎಸ್.ಟಿ. ಕಾಯ್ದೆ ಹಾಗೂ ಪೋಕ್ಸೋ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಕ್ರಮವಾಗಿ ಶೇ. 9.43 ಮತ್ತು ಶೇ. 14.28ರಷ್ಟು ಮಾತ್ರ ಶಿಕ್ಷೆ ಪ್ರಮಾಣ ದಾಖಲಾಗಿರುವುದನ್ನು ಪರಿಶೀಲಿಸಿದ ಸಚಿವರು, ಮಹಿಳೆಯರು, ಮಕ್ಕಳು ಮತ್ತು ದಲಿತರ ಮೇಲಿನ ದೌರ್ಜನ್ಯ ತಡೆ ಪ್ರಕರಣಗಳಲ್ಲಿ ಪರಿಣಾಮಕಾರಿ ಕಾನೂನು ಕ್ರಮ ಕೈಗೊಂಡು ತ್ವರಿತ ನ್ಯಾಯ ಒದಗಿಸಲು ಆದ್ಯತೆ ನೀಡಬೇಕು ಎಂದರು. ರಾಜ್ಯದ ಪ್ರಮುಖ 416 ಪ್ರಕರಣಗಳ ನಿರ್ವಹಣೆಗೆ ಈಗಾಗಲೇ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಲಾಗಿದ್ದು, ಸೂಕ್ಷ್ಮ ಪ್ರಕರಣಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಲು ಸೂಚಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಎಸ್.ಪೊನ್ನಣ್ಣ, ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯ, ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಹಾಗೂ ಹಿರಿಯ ಸರ್ಕಾರಿ ವಕೀಲರು ಉಪಸ್ಥಿತರಿದ್ದರು.