ಸಾಗರ: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಡವರ ಪರವಾಗಿ ಸದಾ ಶ್ರಮಿಸುವ ನೈಜ ಜನನಾಯಕರಾಗಿದ್ದು, ಬಿಜೆಪಿಯ ಪಾದಯಾತ್ರೆ ಕೇವಲ ಬಿ.ವೈ. ವಿಜಯೇಂದ್ರ ಅವರ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮಾಡುತ್ತಿರುವ ಗಿಮಿಕ್ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದ್ದಾರೆ.
ಇಂದು ಸಾಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಹಲವು ಜ್ವಲಂತ ಸಮಸ್ಯೆಗಳು ಹಾಗೂ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸಿಎಂ ಡಿ.ಕೆ ಶಿವಕುಮಾರ್ ಕಾರ್ಯವೈಖರಿಗೆ ಮೆಚ್ಚುಗೆ
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಕಾರ್ಯದಕ್ಷತೆಯನ್ನು ಶ್ಲಾಘಿಸಿದ ಅವರು, "ರಾತ್ರಿ 1 ಗಂಟೆಯವರೆಗೂ ಜನಸಾಮಾನ್ಯರಿಗೆ ಸಿಗುವ ಇಂತಹ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ. ಮಧ್ಯರಾತ್ರಿ ಭೇಟಿಯಾಗಿ ಬಂದ ಮರುದಿನ ಬೆಳಗ್ಗೆ 6 ಗಂಟೆಗೇ ಎಪಿಎಂಸಿ ಮಾರುಕಟ್ಟೆಗೆ ತೆರಳಿ, ಈರುಳ್ಳಿ ಮೂಟೆಗಳ ಮೇಲೆ ಕುಳಿತು ಕಾರ್ಮಿಕರ ಸಮಸ್ಯೆ ಆಲಿಸುತ್ತಾರೆ. ರಾಜ್ಯದ ಅಭಿವೃದ್ಧಿ ಹಾಗೂ ಬಡವರ ಹಿತ ಕಾಯುವುದೇ ಅವರ ಆದ್ಯತೆ," ಎಂದರು.
ಬಿಜೆಪಿ ಪಾದಯಾತ್ರೆ ವಿರುದ್ಧ ತೀವ್ರ ಕಿಡಿ
ಬಿಜೆಪಿ-ಜೆಡಿಎಸ್ ಪಾದಯಾತ್ರೆಯನ್ನು ಲೇವಡಿ ಮಾಡಿದ ಶಾಸಕರು, "ಇದು ಪಕ್ಷದ ಪಾದಯಾತ್ರೆಯಲ್ಲ, ಬದಲಿಗೆ ವಿಜಯೇಂದ್ರ ಅವರ ವೈಯಕ್ತಿಕ ಪಾದಯಾತ್ರೆ. ಬಳ್ಳಾರಿಯಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಜನಾರ್ದನ ರೆಡ್ಡಿ ಅವರ 'ಹಡಬಿ ದುಡ್ಡು' ಖರ್ಚು ಮಾಡಲು ಇದನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರದ್ದೇ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದಾರೆ. ರೆಡ್ಡಿ-ಶ್ರೀರಾಮುಲು ಯುಗ ಮುಗಿದುಹೋದ ಕಥೆ, ಈಗ ಜನ ಇದನ್ನು ನಂಬುವುದಿಲ್ಲ," ಎಂದು ಟೀಕಿಸಿದರು.
ಬಾವಿ ವಿವಾದ: ಸುಳ್ಳು ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ
ಸಾಗರ ಕ್ಷೇತ್ರದಲ್ಲಿ ಸೃಷ್ಟಿಸಲಾಗಿರುವ ಬಾವಿ ಮುಚ್ಚಿದ ವಿವಾದಕ್ಕೆ ಸ್ಪಷ್ಟನೆ ನೀಡಿದ ಅವರು, "ನನ್ನ ವಿರುದ್ಧ ರಾಜಕೀಯ ಪ್ರೇರಿತವಾಗಿ ಅಪಪ್ರಚಾರ ನಡೆಸಿ, ಮಾನಸಿಕ ಕಿರುಕುಳ ನೀಡಲಾಗಿದೆ. ಈ ವಿವಾದದಲ್ಲಿ ಭಾಗಿಯಾದ ನಾರಾಯಣಮೂರ್ತಿ ಸೇರಿದಂತೆ ಸುಳ್ಳು ಆರೋಪ ಹೊರಿಸಿದ ಪ್ರತಿಯೊಬ್ಬರ ವಿರುದ್ಧವೂ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ತಿಳಿಸಿದರು.
ಈ ಸಂಬಂಧ ಮಾಧ್ಯಮಗಳೊಂದಿಗೆ ತೆರಳಿ ನೈಜ ಸ್ಥಿತಿಯನ್ನು ಜನರ ಮುಂದಿಡುತ್ತೇನೆ. ಇವರ ನಾಟಕ ನೋಡಿದರೆ 'ಬಾವಿಯ ಕಥೆ' ಅಂತ ಸಿನಿಮಾ ಮಾಡಬೇಕಷ್ಟೇ," ಎಂದು ವ್ಯಂಗ್ಯವಾಡಿದರು.
ಮಲಂದೂರು ಭಾಗದ ಅರಣ್ಯ ಹಕ್ಕು ಸಮಸ್ಯೆ ಬಗೆಹರಿಸಲು ಕ್ರಮ
ಮಲಂದೂರು ಭಾಗದ ಹೆಬ್ಬೋಡಿ, ಎಡಹಳ್ಳಿ, ಹೊಸಗುಂದ, ಹೊಸೂರು ಸೇರಿದಂತೆ ಹಲವು ಗ್ರಾಮಗಳ ಸುಮಾರು 648 ಕುಟುಂಬಗಳು ಹಾಗೂ 1,400 ಎಕರೆ ಜಮೀನಿನ ಅರಣ್ಯ ಕಾಯ್ದೆ ತೊಡಕಿನ ಬಗ್ಗೆ ಪ್ರಸ್ತಾಪಿಸಿದ ಅವರು, "ಶೀಘ್ರದಲ್ಲೇ ಸಹಾಯಕ ಆಯುಕ್ತರು (AC) ಮತ್ತು ಡಿಎಫ್ಒ (DFO) ಜತೆ ಉನ್ನತ ಮಟ್ಟದ ಸಭೆ ನಡೆಸಿ, ದಶಕಗಳಿಂದ ಕೃಷಿ ಮಾಡಿಕೊಂಡಿರುವ ರೈತರಿಗೆ ಕಾನೂನುಬದ್ಧ ಹಕ್ಕು ದೊರಕಿಸಿಕೊಡಲು ಬದ್ಧನಾಗಿದ್ದೇನೆ," ಎಂದರು.
ಬಡವರಿಗೆ ಸೂರು ಮತ್ತು ಹಕ್ಕುಪತ್ರ ವಿತರಣೆ
ಸರ್ಕಾರದ ಪ್ರಜಾಸೇವಾ ಉಪಕ್ರಮಗಳ ಮೂಲಕ ಕಂದಾಯ ಭೂಮಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಗೆ ಮಂಜೂರಾಗಿರುವ 50,000 ಮನೆಗಳಲ್ಲಿ ಸಾಗರ ಕ್ಷೇತ್ರಕ್ಕೂ ಸೂಕ್ತ ಪಾಲು ದೊರೆಯಲಿದೆ. ಆಶ್ರಯ ಯೋಜನೆಯಡಿ ಈಗಾಗಲೇ 23 ಎಕರೆ ಜಮೀನು ಗುರುತಿಸಲಾಗಿದ್ದು, ಸರ್ವೇ ಕಾರ್ಯ ನಡೆಸಿ ಶೀಘ್ರವೇ ಅರ್ಹ ಬಡ ಫಲಾನುಭವಿಗಳಿಗೆ ನಿವೇಶನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು