ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾಹನ ಸವಾರರ ಪಾಲಿಗೆ ಪ್ರಮುಖ ಸಮಸ್ಯೆಯಾಗಿರುವ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲು ಜಿಬಿಎ (GBA) ಸಚಿವ ಕೃಷ್ಣ ಬೈರೇಗೌಡ ಅವರು ನೂತನ 'ಜೆಟ್ಪ್ಯಾಚರ್' (Jetpatcher) ಯಂತ್ರ ಆಧಾರಿತ ರಸ್ತೆ ದುರಸ್ತಿ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿದ್ದಾರೆ. ಕೇಂದ್ರ ನಗರ ಪಾಲಿಕೆಯು 2 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಂಡಿರುವ ಈ ಪ್ರಾಯೋಗಿಕ ಯೋಜನೆಗೆ ವಿಧಾನಸೌಧದಿಂದ ಎಂ.ಎಸ್. ಬಿಲ್ಡಿಂಗ್ವರೆಗಿನ ರಸ್ತೆಯಲ್ಲಿ ಪ್ರಾತ್ಯಕ್ಷಿಕೆ ನಡೆಸುವ ಮೂಲಕ ಚಾಲನೆ ನೀಡಲಾಯಿತು.
ಕೋಲ್ಡ್ ಮಿಕ್ಸ್ (Cold Mix) ತಂತ್ರಜ್ಞಾನವನ್ನು ಹೊಂದಿರುವ ಈ ಜೆಟ್ಪ್ಯಾಚರ್ ಯಂತ್ರವು 50 ಮಿಮೀ ಆಳದವರೆಗಿನ ರಸ್ತೆ ಗುಂಡಿಗಳನ್ನು ಕ್ಷಣಮಾತ್ರದಲ್ಲಿ ಮುಚ್ಚುವ ಸಾಮರ್ಥ್ಯ ಹೊಂದಿದೆ. ಸಾಂಪ್ರದಾಯಿಕ ವಿಧಾನದಲ್ಲಿ ರಸ್ತೆ ಗುಂಡಿಗಳನ್ನು ಕತ್ತರಿಸಿ, ಕಲ್ಲು-ಮಣ್ಣು ತುಂಬಿ ರೋಲರ್ ಮೂಲಕ ಹದಗೊಳಿಸಲು ಗಂಟೆಗಟ್ಟಲೆ ಸಮಯ ಹಿಡಿಯುತ್ತಿತ್ತು. ಆದರೆ ಈ ಆಧುನಿಕ ಯಂತ್ರವು ಹೈ-ಪ್ರೆಷರ್ ಗಾಳಿಯ ಮೂಲಕ ಗುಂಡಿಯಲ್ಲಿರುವ ಧೂಳು ಹಾಗೂ ನೀರನ್ನು ಹೊರಹಾಕಿ, ಬಿಟುಮಿನ್ ರಾಸಾಯನಿಕ ಹಾಗೂ ಕಲ್ಲುಗಳನ್ನು ಒಟ್ಟಿಗೆ ಜೆಟ್ ಸ್ಪೇ ಮೂಲಕ ತುಂಬಿಸಿ ತಕ್ಷಣವೇ ರಸ್ತೆಯನ್ನು ಸಮತಟ್ಟುಗೊಳಿಸುತ್ತದೆ.
ಈ ವೈಜ್ಞಾನಿಕ ವ್ಯವಸ್ಥೆಯ ಅತ್ಯಂತ ದೊಡ್ಡ ಅನುಕೂಲವೆಂದರೆ ವೇಗ. ಯಂತ್ರವು ಗುಂಡಿ ಮುಚ್ಚಿದ ಕೇವಲ 10 ನಿಮಿಷಗಳಲ್ಲಿ ಅದೇ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಬಹುದಾಗಿದೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ಜಿಬಿಎ ವ್ಯಾಪ್ತಿಯ ಎಲ್ಲಾ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲೂ ಈ ತಂತ್ರಜ್ಞಾನವನ್ನು ವಿಸ್ತರಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರಸ್ತೆಯ ಹಾನಿಯ ಪ್ರಮಾಣ ಹಾಗೂ ಗುಂಡಿಗಳ ಆಳವನ್ನು ಆಧರಿಸಿ ವಿಭಿನ್ನ ತಂತ್ರಜ್ಞಾನಗಳನ್ನು ಬಳಸಿ ರಸ್ತೆ ದುರಸ್ತಿ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ.