ಸಾಗರ: ತಾಲೂಕಿನ ಸಾಗರ ನಗರಸಭೆ ವ್ಯಾಪ್ತಿಗೆ ಬರುವ ಮಂಗಳಬೀಸು ಗ್ರಾಮದ ಸರ್ವೆ ನಂಬರ್ 9ರಲ್ಲಿರುವ ಸರ್ಕಾರಿ ಜಮೀನನ್ನು ಬಡ ರೈತರಿಂದ ಬಲವಂತವಾಗಿ ತೆರವುಗೊಳಿಸಿ, ಇದೀಗ ಹಣಬಲವುಳ್ಳ ಪ್ರಭಾವಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಂಭೀರ ಆರೋಪ ಮಾಡಿದೆ. ನಗರಸಭೆ ಆಯುಕ್ತರು ಮತ್ತು ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಈ ಅಕ್ರಮ ನಡೆದಿದೆ ಎಂದು ಕರವೇ ಸಾಗರ ತಾಲೂಕು ಅಧ್ಯಕ್ಷ ಜಯರಾಮ್ ಸೂರನಗದ್ದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರನ್ನು ಓಡಿಸಿ ಪ್ರಭಾವಿಗಳಿಗೆ ಲೇಔಟ್ ಮಣೆ
ಮಂಗಳಬೀಸು ಗ್ರಾಮದ ಸರ್ವೆ ನಂಬರ್ 9ರ ವ್ಯಾಪ್ತಿಯಲ್ಲಿ ಬಡ ರೈತರು ಕಳೆದ ಹತ್ತು ವರ್ಷಗಳಿಂದ ಕಣ ಮಾಡಿಕೊಂಡು, ಕಾಲುವೆಗಳನ್ನು ನಿರ್ಮಿಸಿ ಸಾಗುವಳಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ, ಇದು ನಗರಸಭೆಗೆ ಸೇರಿದ ಜಾಗವೆಂದು ಹೇಳಿ ಈ ಹಿಂದೆ ಅಧಿಕಾರಿಗಳು ರೈತರನ್ನು ಸ್ಥಳದಿಂದ ತೆರವುಗೊಳಿಸಿದ್ದರು. ಅಂದು ಬಡ ರೈತರು ಹಾಕಿದ್ದ ಬೇಲಿಯನ್ನು ಕಿತ್ತೊಗೆದಿದ್ದ ನಗರಸಭೆ ಆಡಳಿತ, ಇಂದು ಅದೇ ಜಾಗವನ್ನು ಪ್ರಭಾವಿ ವ್ಯಕ್ತಿಗಳಿಗೆ ಪರಭಾರೆ ಮಾಡಲು ಲೆವೆಲಿಂಗ್ ನಡೆಸಿ, ಮೂರು ನಿವೇಶನಗಳನ್ನಾಗಿ ವಿಂಗಡಿಸಿ ತಂತಿ ಬೇಲಿ ಹಾಕಲು ರಹದಾರಿಯಾಗಿದೆ. ಕಂದಾಯ ಇಲಾಖೆಯ ಜಾಗವೆಂದು ಪಹಣಿಯಲ್ಲಿ ನಮೂದಾಗಿದ್ದರೂ, ಸಾಗರದ ಸುತ್ತಮುತ್ತ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಖಾತೆ ಮಾಡಿಕೊಟ್ಟಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಕಚೇರಿಯಲ್ಲೇ ಬುಕಿಂಗ್, ಆಯುಕ್ತರ ಜಾಣಮೌನ
ಈ ಅಕ್ರಮದ ಕುರಿತು ನಗರಸಭೆ ಆಯುಕ್ತರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಿದ್ದು, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಸ್ಥಳದಲ್ಲಿ ಅಕ್ರಮ ಲೇಔಟ್ ವ್ಯವಹಾರಗಳು ಮತ್ತು ನಗರಸಭೆ ಕಚೇರಿಯಲ್ಲಿ ಒಳಒಪ್ಪಂದಗಳ ಮೂಲಕ ಬುಕಿಂಗ್ ಪ್ರಕ್ರಿಯೆಗಳು ಸದ್ದಿಲ್ಲದೆ ನಡೆಯುತ್ತಿವೆ. ಕಮಿಷನರ್ ಜೊತೆ ತಿರುಗಾಡುವ ಕೆಲ ಪ್ರಭಾವಿಗಳಿಗೆ ಇಲ್ಲಿ ನಿವೇಶನಗಳನ್ನು ಅಕ್ರಮವಾಗಿ ಧಾರೆ ಎರೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ನಗರಸಭೆ ಆಡಳಿತ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಜಯರಾಮ್ ಸೂರನಗದ್ದೆ ನೇರವಾಗಿ ದೂರಿದ್ದಾರೆ.
ಡಿಸಿ ಬರುವವರೆಗೂ ಕಚೇರಿ ಮುಂದೆ ಧರಣಿ ಎಚ್ಚರಿಕೆ
ಸದರಿ ಜಾಗಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳ ಬಳಿ ಯಾವುದೇ ಪಿತ್ರಾರ್ಜಿತ ದಾಖಲೆಗಳಿದ್ದರೆ ನಗರಸಭೆ ಕೂಡಲೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ರೈತರ ಮಕ್ಕಳಿಗೆ ಸೇರಬೇಕಾದ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿರುವ ಅಧಿಕಾರಿಗಳ ಕ್ರಮ ಖಂಡನೀಯ. ತಕ್ಷಣವೇ ಆ ಜಾಗದಲ್ಲಿ ಹಾಕಲಾಗಿರುವ ಅಕ್ರಮ ತಂತಿ ಬೇಲಿಯನ್ನು ನಗರಸಭೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಗರಸಭೆ ಕಚೇರಿಯ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸ್ಪಷ್ಟ ದಾಖಲೆಗಳೊಂದಿಗೆ ಪರಿಶೀಲನೆ ನಡೆಸುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು