ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಮಲಯಾಳಂನ ಪ್ರತಿಭಾವಂತ ನಿರ್ದೇಶಕ ಬಸಿಲ್ ಜೋಸೆಫ್ ಕಾಂಬಿನೇಷನ್ನಲ್ಲಿ ಸಿನಿಮಾ ಬರಲಿದೆ ಎಂಬ ಸುದ್ದಿ ಗಾಂಧಿನಗರದಿಂದ ಹಿಡಿದು ಟಾಲಿವುಡ್ವರೆಗೆ ಭಾರಿ ಸದ್ದು ಮಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರ ನಡುವೆ ಕಥೆಯ ಕುರಿತು ಮಾತುಕತೆಗಳು ನಡೆಯುತ್ತಲೇ ಇದ್ದು, ಇತ್ತೀಚೆಗೆ ಬಸಿಲ್ ಜೋಸೆಫ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಒಂದು ಪೋಸ್ಟ್ ಈ ಕುರಿತ ಸುಳಿವನ್ನು ನೀಡಿದೆ.
ಇನ್ನೊಂದೆಡೆ, ಅಲ್ಲು ಅರ್ಜುನ್ ಒಂದೇ ಚಿತ್ರಕ್ಕಾಗಿ ವರ್ಷಗಟ್ಟಲೆ ಸಮಯ ವ್ಯಯಿಸುತ್ತಿದ್ದಾರೆ ಎಂಬ ಬೇಸರ ಅಭಿಮಾನಿಗಳಲ್ಲಿ ಹಾಗೂ ಚಿತ್ರರಂಗದ ವಲಯದಲ್ಲಿದೆ. ನಟನೆಯ ಉತ್ತುಂಗದಲ್ಲಿರುವ ಈ ಹಂತದಲ್ಲಿ, ಅವರು ಸಾಲು ಸಾಲು ಸಿನಿಮಾಗಳನ್ನು ವೇಗವಾಗಿ ಮುಗಿಸಬೇಕು ಎಂಬುದು ಅವರ ಅಭಿಮಾನಿಗಳ ಬಲವಾದ ಬಯಕೆಯಾಗಿದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಲ್ಲು ಅರ್ಜುನ್ ಈಗ ತಮ್ಮ ಕೆಲಸದ ವೇಗವನ್ನು ಹೆಚ್ಚಿಸಲು ಹೊಸ ಹಾದಿ ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದ ಪ್ರಮುಖ ಸನ್ನಿವೇಶಗಳ ಶೂಟಿಂಗ್ ಪೂರ್ಣಗೊಳಿಸುತ್ತಿದ್ದಂತೆಯೇ, ಬಸಿಲ್ ಜೋಸೆಫ್ ಅವರ ಚಿತ್ರದ ಚಿತ್ರೀಕರಣದಲ್ಲೂ ಪಾಲ್ಗೊಳ್ಳಲು ಅವರು ಯೋಜನೆ ರೂಪಿಸುತ್ತಿದ್ದಾರೆ. ಈ ರೀತಿಯಾಗಿ ಸಮಾಂತರವಾಗಿ ಶೂಟಿಂಗ್ ನಡೆಸುವುದರಿಂದ ಸಿನಿಮಾಗಳು ಬೇಗನೆ ತೆರೆಗೆ ಬರಲಿದ್ದು, ಚಿತ್ರಮಂದಿರಗಳ ಮಾಲೀಕರಿಗೂ ಹಾಗೂ ಅಭಿಮಾನಿಗಳಿಗೆ ಹೊಸ ಉತ್ಸಾಹ ನೀಡಲಿದೆ.