ಹೈದರಾಬಾದ್: ನಗರದ ಕುಲ್ಸುಂಪುರ ಪ್ರದೇಶದ ವಸತಿ ಸಮುಚ್ಚಯದಲ್ಲಿ 9 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನಿವಾಸಿಗಳು 55 ವರ್ಷದ ಚಹಾ ಮಾರಾಟಗಾರನನ್ನು ಥಳಿಸಿ ಕೊಂದ ಘಟನೆ ನಡೆದಿದೆ.
ಮೃತನನ್ನು ಅಬ್ದುಲ್ ಅಜೀಜ್ (55) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳ ತಂದೆಯಾಗಿದ್ದ ಆತ, ಪತ್ನಿ ಎರಡು ವರ್ಷಗಳ ಹಿಂದೆ ತೊರೆದ ಬಳಿಕ ತನ್ನ ತಾಯಿಯೊಂದಿಗೆ 80 ಕುಟುಂಬಗಳು ವಾಸಿಸುವ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದನು.
ಕುಲ್ಸುಂಪುರ ಸಹಾಯಕ ಪೊಲೀಸ್ ಆಯುಕ್ತ (ACP) ವಿ. ತಿರುಪತಿ ಅವರ ಮಾಹಿತಿ ಪ್ರಕಾರ, ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಬಾಲಕಿ ಅಪಾರ್ಟ್ಮೆಂಟ್ನ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಕುಳಿತಿದ್ದಾಗ, ಅಬ್ದುಲ್ ಅಜೀಜ್ ಆಕೆಯ ಬಳಿ ಹೋಗಿದ್ದಾನೆ. ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಬಾಲಕಿಯನ್ನು ಆಮಿಷವೊಡ್ಡಿ, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.ಈ ವೇಳೆ ನೆರೆಯ ನಿವಾಸಿ ಹಾಗೂ ಬಾಲಕಿಯ ಕುಟುಂಬದವರು ಘಟನೆಯನ್ನು ಗಮನಿಸಿ ಆತನನ್ನು ಪ್ರಶ್ನಿಸಿದಾಗ, ಅಜೀಜ್ ಅಲ್ಲಿಂದ ಪರಾರಿಯಾಗಿದ್ದಾನೆ.
ನಂತರ ನಿವಾಸಿಗಳು ಅಪಾರ್ಟ್ಮೆಂಟ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.ಸಂಜೆ ಸುಮಾರು 6.30ಕ್ಕೆ ಮದ್ಯದ ಅಮಲಿನಲ್ಲಿದ್ದ ಅಜೀಜ್ ಮತ್ತೆ ಅಪಾರ್ಟ್ಮೆಂಟ್ಗೆ ಬಂದಾಗ, ಬಾಲಕಿಯ ಕುಟುಂಬದವರು ಹಾಗೂ ಇತರ ನಿವಾಸಿಗಳು ಆತನನ್ನು ಸುತ್ತುವರಿದು ತೀವ್ರವಾಗಿ ಥಳಿಸಿದ್ದಾರೆ. ಸಂಜೆ ಸುಮಾರು 7 ಗಂಟೆಗೆ ಪೊಲೀಸರಿಗೆ ಮಾಹಿತಿ ದೊರಕಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.
ಪೊಲೀಸರು ಅಜೀಜ್ನನ್ನು ಕುಲ್ಸುಂಪುರ ಪೊಲೀಸ್ ಠಾಣೆಗೆ ಕರೆದೊಯ್ದು 108 ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಇದೇ ವೇಳೆ ಬಾಲಕಿಯ ಕುಟುಂಬದ ದೂರಿನ ಆಧಾರದ ಮೇಲೆ ಪೋಕ್ಸೋ (POCSO) ಕಾಯ್ದೆಯಡಿ ಅಜೀಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಅಜೀಜ್ ತೀವ್ರ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದನೆಂದು ತಿಳಿಸಿದ್ದಾನೆ. ಬಳಿಕ ಆತನನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಆಂತರಿಕ ಗಾಯಗಳಿಂದ ಮೃತಪಟ್ಟಿದ್ದಾನೆ. ರಾತ್ರಿ ಸುಮಾರು 10.30ಕ್ಕೆ ವೈದ್ಯರು ಆತನನ್ನು ಮೃತ ಎಂದು ಘೋಷಿಸಿದ್ದಾರೆ.
ಇನ್ನೊಂದೆಡೆ, ಮೃತನ ತಾಯಿ ತನ್ನ ಮಗನನ್ನು ನಿವಾಸಿಗಳು ಅಮಾನುಷವಾಗಿ ಥಳಿಸಿದ್ದರಿಂದ ಸಾವನ್ನಪ್ಪಿದ್ದಾನೆ ಎಂದು ಪ್ರತಿದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಕುಲ್ಸುಂಪುರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 105 ಅಡಿಯಲ್ಲಿ ಕೊಲೆಗೆ ಸಮಾನವಲ್ಲದ ಮಾನವಹತ್ಯೆ ಪ್ರಕರಣ ದಾಖಲಿಸಿದ್ದಾರೆ. “ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಅಪಾರ್ಟ್ಮೆಂಟ್ನ ಸಿಸಿಟಿವಿ ದೃಶ್ಯಾವಳಿ ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಿ ಹಲ್ಲೆ ನಡೆಸಿದವರನ್ನು ಗುರುತಿಸಲಾಗುವುದು. ಎರಡೂ ಪ್ರಕರಣಗಳ ತನಿಖೆ ಮುಂದುವರಿದಿದೆ,” ಎಂದು ಎಸಿಪಿ ವಿ. ತಿರುಪತಿ ತಿಳಿಸಿದ್ದಾರೆ.
(@GarudEyeIntel)