ಮಧ್ಯಪ್ರದೇಶದ ಇಂದೋರ್ ನಗರದ ಬಿಚೋಲಿ ಮರ್ಧಾನಾ ಪ್ರದೇಶದಲ್ಲಿ ಚಿರತೆಯೊಂದು ವಸತಿ ಪ್ರದೇಶಕ್ಕೆ ನುಗ್ಗಿ ಡೆಲಿವರಿ ಬಾಯ್ ಮೇಲೆ ದಾಳಿ ನಡೆಸಿದ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಈ ಭಯಾನಕ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿಸಿಟಿವಿ ದೃಶ್ಯಗಳಲ್ಲಿ, ಡೆಲಿವರಿ ಬಾಯ್ ಬೈಕ್ನಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಕತ್ತಲೆಯಿಂದ ಏಕಾಏಕಿ ಹೊರಬಂದ ಚಿರತೆ ಬೈಕ್ ಮೇಲೆಯೇ ಹಾರಿ ದಾಳಿ ನಡೆಸಿರುವುದು ಕಾಣಿಸುತ್ತದೆ. ದಾಳಿಯ ತೀವ್ರತೆಗೆ ಬೈಕ್ ನೆಲಕ್ಕುರುಳಿದರೂ, ಯುವಕ ಸಮಯಪ್ರಜ್ಞೆಯಿಂದ ಎದ್ದು ಓಡಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ಇದರಿಂದ ದೊಡ್ಡ ಅನಾಹುತ ತಪ್ಪಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಸ್ಥಳಕ್ಕೆ ಧಾವಿಸಿ, ಸುತ್ತಮುತ್ತಲಿನ ಪೊದೆಗಳು, ಹೊಲಗಳು ಹಾಗೂ ಚಿರತೆ ಅಡಗಿರಬಹುದಾದ ಪ್ರದೇಶಗಳಲ್ಲಿ ಹಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದರು.ಆದರೆ, ಇದುವರೆಗೆ ಚಿರತೆ ಪತ್ತೆಯಾಗಿಲ್ಲ. ಅದು ಸಮೀಪದ ಅರಣ್ಯ ಪ್ರದೇಶಕ್ಕೆ ಮರಳಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರಿಗೆ ಎಚ್ಚರಿಕೆ
ಶೋಧ ಕಾರ್ಯಾಚರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಆಡಳಿತವು ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ಸೂಚನೆ ನೀಡಿದೆ. ರಾತ್ರಿ ವೇಳೆ ಅನಗತ್ಯವಾಗಿ ಒಬ್ಬರೇ ಹೊರಗೆ ತೆರಳದಂತೆ, ಚಿರತೆ ಕಂಡುಬಂದರೆ ಅಥವಾ ಅದರ ಹೆಜ್ಜೆ ಗುರುತುಗಳು ಕಂಡುಬಂದರೆ ಕೂಡಲೇ ಅರಣ್ಯ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಚಿರತೆಯ ಈ ದಾಳಿಯ ವಿಡಿಯೋ ವೈರಲ್ ಆದ ನಂತರ ಪ್ರದೇಶದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.