ಬೆಂಗಳೂರು: ಸ್ಯಾಂಡಲ್ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಾರೆ. ಸದ್ಯ ದರ್ಶನ್ ಅವರು ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು, ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ದಿನ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ವಿಚಾರವಾಗಿ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ ಒಂದು ವಾರದ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಪತಿ ಜೈಲಿನಲ್ಲಿದ್ದಾಗ ವಿಜಯಲಕ್ಷ್ಮಿ ಅವರು ಹೋಗದ ದೇವಸ್ಥಾನಗಳಿಲ್ಲ, ತೀರಿಸದ ಹರಕೆಗಳಿಲ್ಲ. ದರ್ಶನ್ ಬಿಡುಗಡೆಗಾಗಿ ಸದಾ ಪ್ರಾರ್ಥನೆ, ಪೂಜೆ ಸಲ್ಲಿಸುತ್ತಿರುವ ವಿಜಯಲಕ್ಷ್ಮಿ ಅವರು ಇದೀಗ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಹೊಸ ಫೋಟೋಶೂಟ್ ಭಾರಿ ಸದ್ದು ಮಾಡುತ್ತಿದೆ. ಜೊತೆಗೆ ಅದಕ್ಕೆ ಅಭಿಮಾನಿಯೊಬ್ಬರು ಮಾಡಿರುವ ಕಮೆಂಟ್ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ.
ಮಹಾರಾಣಿಯಂತೆ ಕಂಗೊಳಿಸಿದ ವಿಜಯಲಕ್ಷ್ಮಿ
ಯಾವುದೋ ವಿಶೇಷ ಸಮಾರಂಭಕ್ಕಾಗಿ ವಿಜಯಲಕ್ಷ್ಮಿ ಅವರು ತುಂಬಾನೇ ಗ್ರಾಂಡ್ ಆಗಿ ಮತ್ತು ಸ್ಟೈಲಿಷ್ ಆಗಿ ರೆಡಿಯಾಗಿದ್ದು, ಕ್ವೀನ್ ರೀತಿ ಕಾಣಿಸಿದ್ದಾರೆ. ನೀಲಿ ಹಾಗೂ ಗೋಲ್ಡನ್ ಶೇಡ್ನ ರೇಷ್ಮೆ ಸೀರೆಯನ್ನು ಉಟ್ಟು, ಆಕರ್ಷಕವಾಗಿ ಹೇರ್ಸ್ಟೈಲ್ ಮಾಡಿ ತಲೆಯಲ್ಲಿ ಮಲ್ಲಿಗೆ ಮುಡಿದು, ಮುಗುಳ್ನಗುತ್ತಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಇದರೊಂದಿಗೆ ಭಾರಿ ವಿನ್ಯಾಸದ ಆಭರಣಗಳನ್ನು ಧರಿಸಿ, ಹಣೆಗೆ ಸಣ್ಣ ಬಿಂದಿ ಇಟ್ಟುಕೊಂಡಿರುವ ವಿಜಯಲಕ್ಷ್ಮಿ ಸೌಂದರ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಒಂದು ಕ್ಷಣ ದರ್ಶನ್ ಅವರ ಪ್ರಸ್ತುತ ಸ್ಥಿತಿಯನ್ನು ಮರೆತು ‘ಅತ್ತಿಗೆಮ್ಮ’ ಎಂದು ಪ್ರೀತಿಯಿಂದ ಲೈಕ್ಸ್, ಕಮೆಂಟ್ಗಳ ಮಳೆ ಹರಿಸುತ್ತಿದ್ದಾರೆ.
ಗಮನ ಸೆಳೆದ ಅಭಿಮಾನಿಯ ಮಾರ್ಮಿಕ ನುಡಿ:
ಈ ಎಲ್ಲಾ ಕಮೆಂಟ್ಗಳ ನಡುವೆ ಒಬ್ಬ ಅಭಿಮಾನಿಯ ಭಾವುಕ ಸಾಲುಗಳು ಎಲ್ಲರ ಗಮನ ಸೆಳೆದಿದ್ದು, ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧದ ಬಗ್ಗೆ ಪರೋಕ್ಷವಾಗಿ ಚಾಟಿ ಬೀಸಿದೆ. ಆತ ಕಾಮೆಂಟ್ ಮಾಡುತ್ತಾ, “ನಿಮ್ಮಂತಹ ದೇವತೆಯನ್ನು ಬಿಟ್ಟು ಪರ ಸ್ತ್ರೀಗಾಗಿ ಪರದಾಡಿದ್ದಕ್ಕೆ ನಿಮ್ಮ ಯಜಮಾನನಿಗೆ ಈ ಪರಿಸ್ಥಿತಿ ಬಂದಿರೋದು… ನಿಮ್ಮನ್ನು ಒಬ್ಬರನ್ನೇ ಆರಾಧಿಸಿದ್ದರೆ ದರ್ಶನ್ ಇವತ್ತು ರಾಜನ ಹಾಗೆ ಇರುತ್ತಿದ್ದರು” ಎಂದು ಬೇಸರ ವ್ಯಕ್ತಪಡಿಸಿ ಕೈಮುಗಿಯುವ ಎಮೋಜಿಯನ್ನು ಹಾಕಿದ್ದಾರೆ. ಈ ಮಾರ್ಮಿಕ ಕಮೆಂಟ್ ಈಗ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ದರ್ಶನ್ ಫ್ಯಾನ್ಸ್ ವಲಯದಲ್ಲಿ ಭಾರಿ ಚರ್ಚೆ ಮುನ್ನೆಲೆಗೆ ತಂದಿದೆ.
ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಹೋರಾಟ:
ಮತ್ತೊಂದೆಡೆ, ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬಿರುಸಿನಿಂದ ಸಾಗಿದೆ. ದರ್ಶನ್ ಪರ ಹಿರಿಯ ವಕೀಲರು, “ಸಾಕ್ಷಿಗಳ ವಿಚಾರಣೆ ತಡವಾಗುತ್ತಿದೆ ಮತ್ತು ಜೈಲಿನಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ, ಹೀಗಾಗಿ ಜಾಮೀನು ಮಂಜೂರು ಮಾಡಿ” ಎಂದು ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೋರ್ಟ್, ರಾಜ್ಯ ಸರ್ಕಾರ ಹಾಗೂ ಸೆಷನ್ಸ್ ಕೋರ್ಟ್ಗೆ ನೋಟಿಸ್ ಜಾರಿ ಮಾಡಿದ್ದು, ವರದಿ ನೀಡಲು ಒಂದು ವಾರದ ಗಡುವು ನೀಡಿದೆ.
ಪತಿಯ ಜಾಮೀನು ಪ್ರಕ್ರಿಯೆಗಳು ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ವಿಜಯಲಕ್ಷ್ಮಿ ಅವರ ಈ ಸಾಂಪ್ರದಾಯಿಕ ಲುಕ್ನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿವೆ.