ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಕಿರುತೆರೆಗೆ ಮತ್ತೊಂದು ಆಘಾತ ಎದುರಾಗಿದೆ. ಸ್ಯಾಂಡಲ್ವುಡ್ನ ಹಿರಿಯ ಹಾಗೂ ಜನಪ್ರಿಯ ನಟಿ ಶೈಲಜಾ ಶ್ರೀಶೈಲನ್ ಅವರು ವಯೋಸಹಜ ಅನಾರೋಗ್ಯದಿಂದಾಗಿ ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಬೆಂಗಳೂರಿನ ವೈಯ್ಯಾಲಿಕಾವಲ್ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟ ಶ್ರೀಶೈಲನ್ ಅವರ ಧರ್ಮಪತ್ನಿಯಾಗಿರುವ ಶೈಲಜಾ ಅವರು, ಪುತ್ರ ಶ್ರೀಕಾಂತ್ ಹಾಗೂ ಪುತ್ರಿ ಶ್ರೀವಾಣಿ ಸೇರಿದಂತೆ ಅಪಾರ ಬಂಧು-ಮಿತ್ರರು ಹಾಗೂ ಕಲಾಭಿಮಾನಿಗಳನ್ನು ಅಗಲಿದ್ದಾರೆ.
ಉಪೇಂದ್ರ ಸಿನಿಮಾಗಳ ಮೂಲಕ ಜನಪ್ರಿಯತೆ:
ನಟಿ ಶೈಲಜಾ ಶ್ರೀಶೈಲನ್ ಅವರು ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ವಿಶೇಷವಾಗಿ ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನ ಹಾಗೂ ನಟನೆಯ ಸಿನಿಮಾಗಳಲ್ಲಿ ತಾಯಿ ಪಾತ್ರ ಸೇರಿದಂತೆ ಹಲವು ಪ್ರಮುಖ ಪಾತ್ರಗಳ ಮೂಲಕ ಅವರು ಇಡೀ ಕರ್ನಾಟಕಕ್ಕೆ ಪರಿಚಿತರಾಗಿದ್ದರು. ಉಪೇಂದ್ರ ಅವರ ಸಾರ್ವಕಾಲಿಕ ಸೂಪರ್ ಹಿಟ್ ಚಿತ್ರಗಳಾದ ಎ ಮತ್ತು ಉಪ್ಪಿ 2 ಚಿತ್ರಗಳಲ್ಲದೆ, ‘ಅನಂತನ ಅವಾಂತರ’, ಬಾರೆ ನನ್ನ ಮುದ್ದಿನ ರಾಣಿ, ಪುಟ್ಟ ಹೆಂಡ್ತಿ ಹಾಗೂ ಗೃಹಪ್ರವೇಶ ಸೇರಿದಂತೆ ಹತ್ತಾರು ಯಶಸ್ವಿ ಚಿತ್ರಗಳಲ್ಲಿ ಇವರ ನೈಜ ಅಭಿನಯ ಪ್ರೇಕ್ಷಕರ ಮನ ಗೆದ್ದಿತ್ತು.
ಬೆಳ್ಳಿಪರದೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಅತ್ಯಂತ ಸಕ್ರಿಯರಾಗಿದ್ದ ಶೈಲಜಾ ಅವರು, ಕನ್ನಡ ದೂರದರ್ಶನದ ಇತಿಹಾಸದಲ್ಲೇ ಮೈಲಿಗಲ್ಲಾದ ಧಾರಾವಾಹಿಗಳ ಭಾಗವಾಗಿದ್ದರು. ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ ಸಾರಥ್ಯದ ‘ಮಾಯಾಮೃಗ’ ಮತ್ತು ಮುಕ್ತ ಸೇರಿದಂತೆ ಹಲವು ಜನಪ್ರಿಯ ಮೆಗಾ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅವರು ಕರ್ನಾಟಕದ ಮನೆಮನೆಯ ಮಾತಾಗಿದ್ದರು. ಗಂಭೀರ ಹಾಗೂ ಪೋಷಕ ಪಾತ್ರಗಳಿಗೆ ತಮ್ಮದೇ ಆದ ಗಾಂಭೀರ್ಯ ತಂದುಕೊಡುತ್ತಿದ್ದ ಶೈಲಜಾ ಅವರ ನಿಧನಕ್ಕೆ ಚಿತ್ರರಂಗ ಹಾಗೂ ಕಿರುತೆರೆಯ ನೂರಾರು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಗುರುವಾರ ಮಧ್ಯಾಹ್ನ ನಿಧನರಾದ ಹಿರಿಯ ನಟಿಯ ಪಾರ್ಥಿವ ಶರೀರದ ದರ್ಶನಕ್ಕೆ ಚಿತ್ರರಂಗದ ಆಪ್ತರು ಹಾಗೂ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ತದನಂತರ ಸಕಲ ವಿಧಿವಿಧಾನಗಳೊಂದಿಗೆ ಮೃತರ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ಶ್ರೀರಾಂಪುರದ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲಾಯಿತು. ಹಿರಿಯ ನಟಿಯ ನಿಧನದಿಂದಾಗಿ ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದಂತಾಗಿದೆ.