ಬೆಂಗಳೂರು: ‘ಬಾಸ್’ ಸಿನಿಮಾ ಬಿಡುಗಡೆಗೆ ತಡೆ ಕೋರಿ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಚಿತ್ರತಂದಕ್ಕೆ ಗೆಲುವಾಗಿದ್ದು, ದರ್ಶನ್ ಗೆ ಹಿನ್ನಡೆಯಾಗಿದೆ.
ಬಾಸ್ ಸಿನಿಮಾದ ಬಿಡುಗಡೆಗೆ ಇದ್ದ ಅಡೆ-ತಡೆಗಳು ನಿವಾರಣೆಯಾಗಿದ್ದು, ಇಂದೇ ರಾಜ್ಯದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಕುರಿತು ತುರ್ತು ಪತ್ರಿಕಾ ಹೇಳಿಕೆ ಹೊರಡಿಸಿರುವ ಚಿತ್ರತಂಡ ಸುಮಾರು ಒಂದೂವರೆ ತಿಂಗಳಿನಿಂದಲೂ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ನಡೆದಿದ್ದ ಹೊರಾಟದಲ್ಲಿ ಕೊನೆಗೆ ಚಿತ್ರತಂಡಕ್ಕೆ ಗೆಲುವಾಗಿದೆ ಎಂದಿದೆ.
‘ಬಾಸ್’ ಸಿನಿಮಾದ ನಾಯಕ ನಟ ಹಾಗೂ ನಿರ್ಮಾಪಕರಾದ ತನುಷ್ ಶಿವಣ್ಣ ಮತ್ತು ನಿರ್ದೇಶಕರಾದ ಲವಾ ವಿ ಸಂತೋಷ ಹರ್ಷ ವ್ಯಕ್ತಪಡಿಸಿದ್ದು, ನಮ್ಮ ಸಿನಿಮಾ ಇಂದೇ ಬಿಡುಗಡೆ ಆಗಲಿದೆ. ಇಂದು ಸಂಜೆಯಿಂದಲೇ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ನಿರ್ಮಾಪಕ ತನುಷ್ ಶಿವಣ್ಣ ಮಾತನಾಡಿ, “ನಮ್ಮ ಚಿತ್ರದ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನ್ಯಾಯದ ಗೆಲುವಿನೊಂದಿಗೆ ‘ಬಾಸ್’ ಇಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಪ್ರೇಕ್ಷಕರು ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ,” ಎಂದಿದ್ದಾರೆ.
‘ಬಾಸ್’ ಸಿನಿಮಾ, ನಟ ದರ್ಶನ್ ಮತ್ತು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕುರಿತಾದ ಕಥಾಹಂದರ ಹೊಂದಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕು ಎಂದು ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಚಿತ್ರತಂಡವು ಇದನ್ನು ತಳ್ಳಿ ಹಾಕಿದ್ದು, ‘ಬಾಸ್’ ಸಿನಿಮಾ ದರ್ಶನ್ ಹಾಗೂ ಅವರ ಜೀವನ ಕುರಿತಾದ ಸಿನಿಮಾ ಅಲ್ಲ. ಇದೊಂದು ಕಾಲ್ಪನಿಕ ಕತೆ ಎಂದೇ ವಾದಿಸುತ್ತಾ ಬಂದಿತ್ತು. ನ್ಯಾಯಾಲಯದಲ್ಲಿಯೂ ಸಹ ಚಿತ್ರತಂಡ ಇದೇ ವಾದವನ್ನು ಮಾಡಿತ್ತು. ಕೊನೆಗೂ ಈಗ ‘ಬಾಸ್’ ಸಿನಿಮಾಕ್ಕೆ ಜಯವಾಗಿದೆ.