ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನ ಇಡೀ ಸ್ಯಾಂಡಲ್ವುಡ್ಅನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮೇ 13ರಂದು ಹೃದಯಾಘಾತದಿಂದ ವಿಧಿವಶರಾದ ದಿಲೀಪ್ ಅವರ ಅಗಲಿಕೆಯಿಂದ ಕಂಗಾಲಾಗಿರುವ ಪತ್ನಿ ಶ್ರೀವಿದ್ಯಾ ಅವರು, ಈಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮೊದಲ ಪೋಸ್ಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ.
https://www.instagram.com/p/DYTS7r_P3xt/?utm_source=ig_web_copy_link&igsh=NTc4MTIwNjQ2YQ==
“ಅವರನ್ನು ಸೇರೋವರೆಗೂ ನನಗೆ ನೆಮ್ಮದಿಯಿಲ್ಲ”
ಪತಿಯ ಶವದ ಮುಂದೆ ಗೋಳಾಡಿದ್ದ ಶ್ರೀವಿದ್ಯಾ ಅವರು, ಈಗ ಇನ್ಸ್ಟಾಗ್ರಾಮ್ನಲ್ಲಿ ಅತ್ಯಂತ ಭಾವುಕವಾಗಿ ಬರೆದುಕೊಂಡಿದ್ದಾರೆ,”ದಿಲೀಪ್ ಅವರು ಕಲೆ, ಸಿನಿಮಾ ಮತ್ತು ಅವರು ಮಾಡಿದ ಪ್ರತಿ ಕರುಣೆಯ ಕೆಲಸದ ರೂಪದಲ್ಲಿ ನಮ್ಮ ನಡುವೆಯೇ ಇರುತ್ತಾರೆ. ಅವರು ಶಾಂತಿಯಿಂದ ಇರಲಿ ಎಂದು ನಾನು ಅವರನ್ನು ಕಳುಹಿಸಿಕೊಡಲು ನಿರ್ಧರಿಸಿದ್ದೇನೆ. ಆದರೆ ಒಂದು ವಿಷಯವಂತೂ ಖಚಿತ ಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗಲಾರದು.”
25ನೇ ವಿವಾಹ ವಾರ್ಷಿಕೋತ್ಸವ
ವಿಪರ್ಯಾಸವೆಂದರೆ, ದಿಲೀಪ್ ಮತ್ತು ಶ್ರೀವಿದ್ಯಾ ದಂಪತಿಗೆ ಈ ವರ್ಷ 25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವಿತ್ತು. “25ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಇಂಥದ್ದೊಂದು ಗಿಫ್ಟ್ ಕೊಟ್ಟು ಹೋದರು. ನಮಗೆಲ್ಲ ನೋವು ಕೊಟ್ಟು ಅವರು ನಗುತ್ತಾ ಹೊರಟು ಹೋದರು” ಎಂದು ಅಂತ್ಯಕ್ರಿಯೆಯ ವೇಳೆ ಶ್ರೀವಿದ್ಯಾ ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ನೆರೆದಿದ್ದವರ ಎದೆಯನ್ನು ಕಲಕುವಂತಿತ್ತು.
“ಪತ್ನಿಯ ಖುಷಿಯೇ ನನ್ನ ಲೈಫ್ ಗೋಲ್” ಎಂದಿದ್ದ ದಿಲೀಪ್
ದಿಲೀಪ್ ರಾಜ್ ಅವರು ಈ ಹಿಂದೆ ನೀಡಿದ್ದ ಸಂದರ್ಶನವೊಂದು ಈಗ ವೈರಲ್ ಆಗುತ್ತಿದೆ. ಅದರಲ್ಲಿ ಅವರು, “ಶ್ರೀವಿದ್ಯಾ ಅವರನ್ನು ಖುಷಿಯಾಗಿ ಇಡೋದೇ ನನ್ನ ಜೀವನದ ಉದ್ದೇಶ. ಅವರು ಚೆನ್ನಾಗಿದ್ದರೆ ನಾನು ಚೆನ್ನಾಗಿರುತ್ತೇನೆ” ಎಂದು ಹೇಳಿದ್ದರು. ಕಾಲೇಜು ದಿನಗಳಿಂದಲೇ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ಕಿರುತೆರೆಯಲ್ಲಿ ಅತ್ಯಂತ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಪತ್ನಿಯ ಸಪೋರ್ಟ್ ಇಲ್ಲದೆ ನಾನು ಏನೂ ಅಲ್ಲ ಎಂದು ದಿಲೀಪ್ ಸದಾ ಹೇಳುತ್ತಿದ್ದರು.
ಸಾಧನೆಯ ಹಾದಿ ಮತ್ತು ಅಂತಿಮ ವಿದಾಯ
ನಿರ್ಮಾಣ: ‘ಪಾರು’, ‘ಮಲೆಮಹದೇಶ್ವರ’ ಹಾಗೂ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟ ‘ಹಿಟ್ಲರ್ ಕಲ್ಯಾಣ’ ಸೇರಿದಂತೆ ಹಲವು ಧಾರಾವಾಹಿಗಳನ್ನು ಈ ಜೋಡಿ ನಿರ್ಮಿಸಿತ್ತು.’ಎಜೆ’ (AJ) ಪಾತ್ರದ ಮೂಲಕ ಮನೆಮಾತಾಗಿದ್ದ ದಿಲೀಪ್, ಸಜ್ಜನ ಕಲಾವಿದ ಎಂದು ಹೆಸರು ಮಾಡಿದ್ದರು.
ರಾಮನಗರದಲ್ಲಿರುವ ಕುಟುಂಬದ ಫಾರ್ಮ್ಹೌಸ್ನಲ್ಲಿ ದಿಲೀಪ್ ರಾಜ್ ಅವರ ಅಂತಿಮ ಸಂಸ್ಕಾರ ನೆರವೇರಿತು.ಕನಸಿನ ಮನೆ ‘ರಾಜ್ ಶ್ರೀ’ ಪ್ರವೇಶಿಸಿದ ಕೆಲವೇ ವರ್ಷಗಳಲ್ಲಿ ದಿಲೀಪ್ ಇಹಲೋಕ ತ್ಯಜಿಸಿರುವುದು ಅವರ ಪತ್ನಿ ಮತ್ತು ಪುತ್ರಿಯರಾದ ಧೃತಿ ಹಾಗೂ ಅದಿತಿಗೆ ತುಂಬಲಾರದ ನಷ್ಟವಾಗಿದೆ.