ಈ ವರ್ಷ ಭಾರತದ ವಿವಿಧ ಚಿತ್ರರಂಗಗಳಲ್ಲಿ ಸೋಲುಂಡಿರುವ ಚಿತ್ರರಂಗ ಯಾವುದು ಎಂಬ ಪ್ರಶ್ನೆ ಮೂಡಿದರೆ, ಸಿನಿಮಾ ಬಗ್ಗೆ ಜ್ಞಾನ ಇರುವ ಪ್ರತಿಯೊಬ್ಬನ ಬಾಯಲ್ಲೂ ಬರುವ ಹೆಸರು ಕನ್ನಡ ಚಿತ್ರರಂಗ.
ಹೌದು, ಈ ವರ್ಷ ಕನ್ನಡದಲ್ಲಿ ಗೆದ್ದ ಚಿತ್ರಗಳ ಹತ್ತು ಹೆಸರುಗಳನ್ನು ಹೇಳಿ ಎಂದರೆ ಯಾರ ಬಳಿಯೂ ಉತ್ತರವಿಲ್ಲ. ಪೋಸ್ಟರ್ಗಳಲ್ಲಿ ಹಾಗೂ ವಿಜಯಯಾತ್ರೆ ಮಾಡಿ ನಾವು ್ಗಗೆದ್ದೆವು ಎಂದು ಘೋಷಿಸಿಕೊಂಡ ಚಿತ್ರಗಳೂ ಸಹ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿರುವುದು ಸಿನಿ ರಸಿಕರಿಗೇ ತಿಳಿದಿರುವ ವಿಷಯ.
ಹೀಗೆ ಹೀನಾಯವಾಗಿ ಸೋಲುತ್ತಿರುವ ಕನ್ನಡದ ಕೆಲ ಚಿತ್ರಗಳು ಚೆನ್ನಾಗಿದ್ದರೂ ತಮಗೆ ಸಿಗಬೇಕಾದ ಬೆಲೆ ಸಿಗದೇ ಕಂಗಾಲಾಗಿವೆ. ಅಂತಹ ಚಿತ್ರಗಳಿಗೆ ಒಟಿಟಿಯಲ್ಲಿ ಒಳ್ಳೆಯ ಮನ್ನಣೆ ಸಿಕ್ಕಿ ಚಿತ್ರ ನಿರ್ಮಿಸಿದ ಹಾಗೂ ನಿರ್ದೇಶಿಸಿದ ನಿರ್ದೇಶಕರಲ್ಲಿ ಭರವಸೆ ಮೂಡಿಸಿದೆ.
ಹಾಗೆಂದ ಮಾತ್ರಕ್ಕೆ ಒಟಿಟಿಯಲ್ಲಿ ಕನ್ನಡದ ಚಿತ್ರಗಳಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುತ್ತಿಲ್ಲ. ಬದಲಾಗಿ ಒಟಿಟಿಗಳಿಗೆ ಸ್ಟಾರ್ಗಳಲ್ಲದವರ ಚಿತ್ರಗಳನ್ನು ತಲುಪಿಸುವುದು ಹರಸಾಹಸವೇ ಸರಿ. ಈ ಕುರಿತು ನಿರ್ದೇಶಕ ಪವನ್ ಒಡೆಯರ್ ಫಸ್ಟ್ ನ್ಯೂಸ್ ಜತೆ ಮಾತನಾಡಿದ್ದು, ಕನ್ನಡ ಚಿತ್ರರಂಗ ಹಾಗೂ ಒಟಿಟಿ ವೇದಿಕೆಗಳ ನಡುವೆ ಇರುವ ಅಂತರ ಹಾಗೂ ಸಮಸ್ಯೆಯ ಕುರಿತು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದ ವಿಫಲತೆಗೆ ಪ್ರಮುಖ ಕಾರಣಗಳಲ್ಲಿ ಚಿತ್ರ ಮಾಡಬಲ್ಲ ಸಾಮರ್ಥ್ಯ ಹಾಗೂ ಅನುಭವ ಇರುವ ಕಲಾವಿದರು ಚಿತ್ರ ಮಾಡದೇ ಸುಮ್ಮನಿರುವುದು ಪ್ರಮುಖ ಕಾರಣ ಎಂದರೆ, ಹೆಚ್ಚಾಗಿ ಸಮಸ್ಯೆಯಾಗುತ್ತಿರುವುದು ಹೊಸ ನಿರ್ಮಾಪಕರಿಂದ ಎನ್ನುತ್ತಾರೆ ಪವರ್ ಒಡೆಯರ್. ಯಾರೋ ಅಮೆಜಾನ್ನಲ್ಲಿ, ನೆಟ್ಫ್ಲಿಕ್ಸ್ನಲ್ಲಿ ನಾನು ಮಾಡಿಸಿಕೊಡುತ್ತೇನೆ ಎಂದು ಹೇಳಿದ ಮಾತು ಕೇಳಿ ನಂಬಿ ಮೋಸ ಹೋಗುತ್ತಿದ್ದಾರೆ. ಆದರೆ ಅಸಲಿಯತ್ತಿಗೆ ಅಮೆಜಾನ್ ಪ್ರೈಮ್ನವರು ಕನ್ನಡ ಚಿತ್ರಗಳನ್ನು ತೆಗೆದುಕೊಳ್ಳುತ್ತಿಲ್ಲ, ಅವರು ಬಿಡಿ ನೆಟ್ಫ್ಲಿಕ್ಸ್ನವರು ಕನ್ನಡ ಚಿತ್ರವನ್ನು ಮೂಸುತ್ತಲೂ ಇಲ್ಲ ಎಂದು ಕನ್ನಡ ಚಿತ್ರಗಳತ್ತ ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಇರುವ ಬೆಲೆಯನ್ನು ಬಿಚ್ಚಿಟ್ಟಿದ್ದಾರೆ.
ಇನ್ನು ಯಾವುದಾದರೂ ಚಿತ್ರ ಹಿಟ್ ಆದರೆ ಸಾಕು ಅದೇ ಮಾದರಿಯಲ್ಲಿ ಚಿತ್ರವನ್ನು ಮಾಡಲು ಮುಂದಾಗಿಬಿಡುತ್ತಾರೆ. ಅದಕ್ಕೆ ಏನಿಲ್ಲವೆಂದರೂ ಐದಾರು ಕೋಟಿ ಖರ್ಚಾಗುತ್ತದೆ. ಅಷ್ಟು ಖರ್ಚು ಮಾಡಿ ಲಾಭ ಗಳಿಸುವುದಾದರೂ ಹೇಗೆ? ಅದರ ಬದಲು ಒಂದೆರಡು ಕೋಟಿ ಒಳಗೆ ಚಿತ್ರವನ್ನು ನಿರ್ಮಿಸಲು ಮುಂದಾಗಬೇಕು, ಅಂತಹ ಚಿತ್ರಗಳು ಲಾಭ ಗಳಿಸಿ ಮುಂದೆ ಏನಾದರೂ ಮಾಡಲು ವಿಶ್ವಾಸವನ್ನು ಹುಟ್ಟಿಸುತ್ತವೆ. ಉದಾಹರಣೆಗೆ ಸು ಫ್ರಮ್ ಸೋ ತೆಗೆದುಕೊಂಡ ಪವನ್ ಅದೇ ರೀತಿಯ ಹತ್ತಾರು ಚಿತ್ರಗಳು ಕಡಿಮೆ ಬಜೆಟ್ನಲ್ಲಿ ಬಂದು ಹಿಟ್ ಆದರೆ ಕನ್ನಡ ಚಿತ್ರರಂಗವೂ ಇತರೆ ಚಿತ್ರಗಳ ಹಾಗೆ ಆಗುತ್ತದೆ ಹಾಗೂ ಒಟಿಟಿಯಲ್ಲಿ ಕನ್ನಡ ಚಿತ್ರಗಳಿಗೂ ಬೆಲೆ ಸಿಗುತ್ತದೆ ಎಂದು ಹೇಳಿಕೊಂಡರು.