ನಿನ್ನೆ ( ಮೇ 19 ) ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ 23ನೇ ವರ್ಷದ ವಿವಾಹ ವಾರ್ಷಿಕೋತ್ಸವದ ವಿಶೇಷ ದಿನವಿತ್ತು. ಹೀಗಾಗಿ ವಿಜಯಲಕ್ಷ್ಮಿ ದರ್ಶನ್ ತಾವು ತಮ್ಮ ಪತಿಯನ್ನು ಖುದ್ದಾಗಿ, ವೈಯಕ್ತಿಕವಾಗಿ ಭೇಟಿಯಾಗಲು ಅನುವು ಮಾಡಿಕೊಡುವಂತೆ ಪರಪ್ಪನ ಅಗ್ರಹಾರ ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಬೇಡಿಕೆಯನ್ನು ಇಟ್ಟಿದ್ದರು.
ಅದರಂತೆ ವಿಜಯಲಕ್ಷ್ಮಿ ದರ್ಶನ್ ತಮ್ಮ ವಿವಾಹ ವಾರ್ಷಿಕೋತ್ಸವದ ದಿನದಂದು ಮಗನ ಸಮೇತ ಕೊಲೆ ಆರೋಪಿ ದರ್ಶನ್ ಇದ್ದ ಕಾರಾಗೃಹಕ್ಕೆ ತೆರಳಿ ಭೇಟಿಯಾಗಿ ಬಂದಿದ್ದರು.
ಈ ಸುದ್ದಿಗಳ ಜತೆ ಕೆಲ ಮಾಧ್ಯಮಗಳು ನಟ ದರ್ಶನ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂಬ ಸುದ್ದಿ ಸಹ ಹರಿದಾಡಿತ್ತು. ಹಲವು ದಿನಗಳಿಂದ ಜೈಲಿನಲ್ಲೇ ಇರುವ ದರ್ಶನ್ ಬೇಸತ್ತು ಆತ್ಮಹತ್ಯೆ ಯತ್ನ ಮಾಡಿದರು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ ಎಂದು ಹೆಡ್ಲೈನ್ಗಳು ಹರಿದಾಡಿದ್ದವು.
ಇದನ್ನು ದರ್ಶನ್ ಮೇಲೆ ಎಲ್ಲಿಲ್ಲದ ಪ್ರೀತಿ ಇಟ್ಟುಕೊಂಡಿರುವ ಕೆಲ ಅಭಿಮಾನಿಗಳು ಕಂಡು ತೀರ ಬೇಸರಕ್ಕೆ ಒಳಗಾಗಿದ್ದರು. ಆದರೆ ಪರಪ್ಪನ ಅಗ್ರಹಾರ ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಮಾತನಾಡಿ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆಯನ್ನು ಕೊಟ್ಟರು. ಇದೊಂದು ಗಾಳಿ ಸುದ್ದಿಯಾಗಿದ್ದು ಅಭಿಮಾನಿಗಳಲ್ಲಿ ಇದರಿಂದ ಆತಂಕ ಮೂಡಿದೆ, ಯಾರೂ ಸಹ ಈ ಸುದ್ದಿಗೆ ಕಿವಿಗೊಡಬೇಡಿ ಎಂದರು. ಇನ್ನು ಇದೊಂದು ಆಧಾರರಹಿತ ವದಂತಿಯಾಗಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿಕೆ ನೀಡಿದರು.
ಇನ್ನೂ ಮುಂದುವರಿದು ಮಾತನಾಡಿದ ಅಲೋಕ್ ಕುಮಾರ್ ದರ್ಶನ್ ಅವರಿಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ನಲ್ಲಿ ಬೇಲ್ ಸಿಗದೇ ಇರುವುದರಿಂದ ಕುಗ್ಗಿರುವುದು ನಿಜ ಎಂದರು. ಅಲ್ಲದೇ ತಿಂಗಳಿಗೆ 60 ನಿಮಿಷ ದೂರವಾಣಿಯಲ್ಲಿ ಮಾತನಾಡುವ ಅವಕಾಶವನ್ನು ಏರಿಕೆ ಮಾಡಿ ಎಂದೂ ಸಹ ದರ್ಶನ್ ಮನವಿ ಮಾಡಿಕೊಂಡರು ಎಂದು ಅಲೋಕ್ ಕುಮಾರ್ ತಿಳಿಸಿದರು.
Disclaimer: ಜೀವನದಲ್ಲಿ ಯಾವುದೇ ಕಹಿ ಘಟನೆ ನಡೆದರೂ ಅಥವಾ ಹಿನ್ನಡೆಯುಂಟಾದರೂ ಎಲ್ಲದ್ದಕ್ಕೂ ಆತ್ಮಹತ್ಯೆಯೇ ಪರಿಹಾರವಲ್ಲ. ಒಂದುವೇಳೆ ನಿಮಗೆ ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆ ಬಂದರೆ ನಿಮ್ಮ ಪ್ರೀತಿ ಪಾತ್ರರ ಜತೆ ಮಾತನಾಡಿ ಅಥವಾ ಈ ಟೋಲ್ ಫ್ರೀ ನಂಬರ್ಗೆ ಕರೆ ಮಾಡಿ: 9152987821