ಬಾಲಿವುಡ್ನ ಫಿಟ್ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೃದಯಸ್ಪರ್ಶಿ ಸಂದೇಶವೊಂದು ಸಖತ್ ವೈರಲ್ ಆಗುತ್ತಿದೆ. ಕಷ್ಟದ ದಿನಗಳಲ್ಲಿ ತಮಗೆ ಬೆನ್ನೆಲುಬಾಗಿ ನಿಂತ ಪತ್ನಿಯ ತ್ಯಾಗ ಮತ್ತು ಪ್ರೀತಿಯನ್ನು ರಾಜ್ ಕುಂದ್ರಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಕಷ್ಟದ ದಿನಗಳ ನೆರಳು: ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಸಾಲುಗಳನ್ನು ಬರೆದುಕೊಂಡಿರುವ ರಾಜ್ ಕುಂದ್ರಾ, ಈ ಜನ್ಮದಿನವು ಕೇವಲ ವಯಸ್ಸಿನ ಮೈಲಿಗಲ್ಲು ಅಥವಾ ಆಚರಣೆಗೆ ಸೀಮಿತವಾಗಿಲ್ಲ. ಬದಲಿಗೆ, ತಮ್ಮ ಜೀವನದಲ್ಲಿ ಶಿಲ್ಪಾ ಶೆಟ್ಟಿ ಅವರ ಉಪಸ್ಥಿತಿ ಎಷ್ಟು ಮುಖ್ಯ ಎಂಬುದನ್ನು ನೆನಪಿಸುವ ದಿನವಾಗಿದೆ ಎಂದಿದ್ದಾರೆ. ಕಠಿಣ ಸಂದರ್ಭಗಳಲ್ಲಿ ಶಿಲ್ಪಾ ನೀಡಿದ ಧೈರ್ಯ ಮತ್ತು ನಂಬಿಕೆ ತಮಗೆ ಹೊಸ ಚೇತನ್ ನೀಡಿತು ಎಂದು ಅವರು ನೆನೆದಿದ್ದಾರೆ.
ದೇವಿಗೆ ಹೋಲಿಸಿದ ಪತಿ: ಪತ್ನಿಯ ನಿಷ್ಠೆ ಮತ್ತು ಆಂತರಿಕ ಶಕ್ತಿಯನ್ನು ಕೊಂಡಾಡಿರುವ ಅವರು, ಶಿಲ್ಪಾ ಶೆಟ್ಟಿ ಕೇವಲ ಪತ್ನಿಯಾಗಿರದೆ, ಕತ್ತಲೆಯ ಹಾದಿಯಲ್ಲಿ ಬೆಳಕಾಗಿ, ಅನಿಶ್ಚಿತತೆಯ ಸಮಯದಲ್ಲಿ ನಂಬಿಕೆಯಾಗಿ ಮೂಡಿಬಂದಿದ್ದಾರೆ. ಅವರಲ್ಲಿ ಒಬ್ಬ ದೇವಿಯ ಶಕ್ತಿಯಿದೆ. ಅವರು ಕೇವಲ ಪೋಷಿಸುವ ತಾಯಿಯಷ್ಟೇ ಅಲ್ಲ, ರಕ್ಷಿಸುವ ಮತ್ತು ಕ್ಷಮಿಸುವ ಗುಣವಿರುವ ಅಪ್ರತಿಮ ಶಕ್ತಿಯಾಗಿದ್ದಾರೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಕೊನೆಯಲ್ಲಿ, ದುರ್ಗಾ ಮಾತೆಯು ಶಿಲ್ಪಾಗೆ ಎಲ್ಲ ಸೌಭಾಗ್ಯಗಳನ್ನು ಕರುಣಿಸಲಿ ಎಂದು ಹಾರೈಸಿದ್ದಾರೆ.
ಕುಟುಂಬದ ಹಿನ್ನೆಲೆ: ನವೆಂಬರ್ ೨೨, ೨೦೦೯ ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಮೇ ೨೦೧೨ ರಲ್ಲಿ ಮಗ ವಿಯಾನ್ ಜನಿಸಿದನು. ತದನಂತರ ಫೆಬ್ರವರಿ ೨೦೨೦ ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗಳು ಸಮಿಶಾ ಇವರ ಕುಟುಂಬವನ್ನು ಸೇರಿಕೊಂಡಳು. ಸದ್ಯ ರಾಜ್ ಕುಂದ್ರಾ ಅವರ ಈ ಪೋಸ್ಟ್ಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಕೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ವೃತ್ತಿಜೀವನದ ಅಪ್ಡೇಟ್ಸ್: ವೃತ್ತಿ ಬದುಕಿನ ವಿಚಾರಕ್ಕೆ ಬಂದರೆ, ಉದ್ಯಮಿ ರಾಜ್ ಕುಂದ್ರಾ ಇತ್ತೀಚೆಗೆ ಗೀತಾ ಬಸ್ರಾ ನಟನೆಯ ‘ಮೆಹರ್’ ಎಂಬ ಪಂಜಾಬಿ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಇತ್ತ ಶಿಲ್ಪಾ ಶೆಟ್ಟಿ ಕೊನೆಯದಾಗಿ ‘ಸೂಪರ್ ಡ್ಯಾನ್ಸರ್ ಚಾಪ್ಟರ್ ೫’ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಸದ್ಯ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅವರು, ಜೂನ್ ೧೨ ರಿಂದ ಜೀ೫ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಮಾ ಹೈ ನಾ’ ಎಂಬ ಹೊಸ ಶೋ ಮೂಲಕ ನಿರೂಪಕಿಯಾಗಿಯೂ ಪ್ರೇಕ್ಷಕರ ಮುಂದೆ ಬರಲಿದ್ದಾರೆ.