ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಮ್ಯಾಂಗೋ ಪಚ್ಚ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾದ ಮ್ಯಾಂಗೋ ಪಚ್ಚಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿದೆ.
ಕನ್ನಡಕ್ಕೆ ಮತ್ತೋರ್ವ ಭರವಸೆಯ ನಟ ಹಾಗೂ ನಿರ್ದೇಶಕ ಸಿಕ್ಕ ಎಂದು ಸಿನಿ ರಸಿಕರು ಹೇಳುತ್ತಿದ್ದು, ಮ್ಯಾಂಗೋ ಪಚ್ಚ ವರ್ಷದ ಒಳ್ಳೆಯ ಚಿತ್ರಗಳ ಪಟ್ಟಿಯನ್ನು ಸೇರಿಕೊಂಡಿದೆ. ಹೀಗೆ ಉತ್ತಮ ಹೆಸರು ಮಾಡುತ್ತಿರುವ ಕಾರಣ ಮ್ಯಾಂಗೋ ಪಚ್ಚ ಚಿತ್ರತಂಡ ಎರಡನೇ ದಿನವೇ ಸಣ್ಣ ಸಕ್ಸಸ್ ಮೀಟ್ ನಡೆಸಿ ಪತ್ರಿಕಾಗೋಷ್ಟಿಯನ್ನು ಹಮ್ಮಿಕೊಂಡಿತ್ತು.
ಈ ಚಿತ್ರಕ್ಕೆ ಸುದೀಪ್ ಪತ್ನಿ ಸಹ ಬಂಡವಾಳ ಹಾಕಿದ್ದು, ಸುದೀಪ್ ಸಹ ಹಾಜರಿದ್ದರು. ಈ ವೇಳೆ ಪತ್ರಕರ್ತರೊಬ್ಬರು ನಿಮ್ಮಲ್ಲಿ ಟ್ಯಾಲೆಂಟ್ ಇದ್ದರೂ ಸಹ ಹಲವಾರು ಮಂದಿ ನಿಮ್ಮನ್ನು ನೆಪೋಟಿಸಂ ಹೆಸರಿನಲ್ಲಿ ಟ್ರೋಲ್ ಮಾಡುತ್ತಿದ್ದಾರೆ, ಮ್ಯಾಂಗೋ ಪಚ್ಚ ಎಂದರೆ, ಅರೇ ಏನಪ್ಪ ಸುದೀಪ್ ಮಗಳು, ಸುದೀಪ್ ಅಕ್ಕನ ಮಗ ಬರೀ ನೆಪೋಟಿಸಂ ಆಯ್ತು ಎನ್ನುತ್ತಿದ್ದಾರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದರು.
ಇದಕ್ಕೆ ಉತ್ತರಿಸಿದ ಸಂಚಿತ್ ನಾನು ಶ್ರಮವಹಿಸಿ ಕೆಲಸ ಮಾಡಿದ್ದು, ಅದಕ್ಕೆ ತಕ್ಕಂತಹ ಮೆಚ್ಚುಗೆ ಬರುತ್ತಿದೆ, ಅದರ ಮಧ್ಯ ಇಂತಹ ನೆಗೆಟಿವ್ ಕಾಮೆಂಟ್ಗಳು ಕಾಣಿಸುತ್ತಿಲ್ಲ ಎಂದು ಖಡಕ್ ರಿಪ್ಲೈ ಕೊಟ್ಟಿದ್ದರು. ಇನ್ನು ಇದಕ್ಕೆ ಅಲ್ಲೇ ಇದ್ದಿ ಸುದೀಪ್ ಸಹ ಪ್ರತಿಕ್ರಿಯಿಸಿ ನೆಪೋಟಿಸಂ ಶುರುವಾಗಿದ್ದು, ದೊಡ್ಮನೆಯಿಂದ, ಶಿವಣ್ಣನನ್ನು ಏಕೆ ನೀವೀ ಪ್ರಶ್ನೆ ಕೇಳಲಿಲ್ಲ? ಮುಂಬೈನಲ್ಲಿ ಹುಟ್ಟಿದ ಪದವನ್ನು ಇಲ್ಲಿ ಬಳಸಬೇಡಿ, ಕರ್ನಾಟಕದಲ್ಲಿ ಕಲೆ ಇದ್ದರೆ ಮಾತ್ರ ಬೆಳೆಯಲು ಸಾಧ್ಯ, ಶಿವಣ್ಣ ಹಾಗೂ ಅಪ್ಪು ಅದೇ ಕಾರಣಕ್ಕೆ ಸ್ಟಾರ್ಗಳಾದರು, ಹಲವರಿಗೆ ಸ್ಪೂರ್ತಿಯಾದರು, ಹಾಗೆಯೇ ನನ್ನ ಮನೆಯಲ್ಲಿ ಎಲ್ಲರೂ ಚಿತ್ರರಂಗಕ್ಕೆ ಬಂದಿಲ್ಲ, ಗಾಯನದಲ್ಲಿ ಆಸಕ್ತಿ ಇರುವ ನನ್ನ ಮಗಳು ಹಾಗೂ ನಟನೆಯಲ್ಲಿ ಆಸಕ್ತಿ ಇರುವ ನನ್ನ ಅಳಿಯ ಬಂದಿದ್ದಾರೆ, ಅರ್ಹತೆ ಇದ್ದವರು ಬೆಳೆಯುತ್ತಾರೆ ಅಷ್ಟೇ ಎಂದರು.
ಈ ಹೇಳಿಕೆ ಎಲ್ಲೆಡೆ ವೈರಲ್ ಆಯಿತು ಹಾಗೂ ಕಿಚ್ಚ ಸುದೀಪ್ ಪ್ರಬುದ್ಧ ರಿಪ್ಲೈ ಬಗ್ಗೆ ಮೆಚ್ಚುಗೆಗಳು ವ್ಯಕ್ತವಾದವು. ಅಲ್ಲದೇ ಇದರ ಬಗ್ಗೆ ನಿನ್ನೆ ( ಜೂನ್ 7 ) ಮ್ಯಾಂಗೋ ಪಚ್ಚ ಚಿತ್ರ ನೋಡಲು ಸುದೀಪ್ ಜತೆ ಬಂದಿದ್ದ ಶಿವಣ್ಣನಿಗೂ ಸಹ ಕೇಳಲಾಯಿತು. ಪತ್ರಕರ್ತರೊಬ್ಬರು ನೆಪೋಟಿಸಂ ಬಗ್ಗೆ ಕೇಳಿದಾಗ ಶಿವಣ್ಣ ಅವರನ್ನು ಈ ಪ್ರಶ್ನೆಯನ್ನೇಕೆ ನೀವು ಕೇಳಿಲ್ಲ ಎಂದರು ಎಂದಾಗ ಕೋಪದಿಂದಲೇ ಕೇಳಿದ ಶಿವಣ್ಣ ‘ನೀವ್ಯಾಕೆ ಕೇಳಿದ್ರಿ ಅದನ್ನ? ಅದು ಕೇಳುವಂತಹ ಪ್ರಶ್ನೆನಾ? ಕೇಳುವಂತಹ ಅಗತ್ಯವಿರಲಿಲ್ಲ. ಎಲ್ಲ ಮನುಷ್ಯನೂ ಕನಸು ಕಾಣ್ತಾನೆ. ಇವರ ಮಕ್ಕಳು, ಅವರ ಮಕ್ಕಳೇ ಕನಸು ಕಾಣಬೇಕು ಎಂದೇನಿಲ್ಲ’ ಎಂದು ಕಿಡಿಕಾರಿದರು.
ಮುಂದುವರಿದು ಮಾತನಾಡಿದ ಶಿವಣ್ಣ ‘ಆ ಹೇಳಿಕೆಯನ್ನು ನಾನು ನೋಡಿದೆ. ಅದನ್ನೆಲ್ಲ ನಾನು ಕೇರ್ ಮಾಡೋಕೆ ಹೋಗಲ್ಲ. ಏಕೆಂದರೆ ಎಲ್ಲ ಮನುಷ್ಯನಿಗೂ ಅಧಿಕಾರವಿದೆ. ದೊಡ್ಡವನಾಗಬೇಕು ಎಂದು ಯೋಚಿಸಲು, ಕನಸು ಕಾಣುವುದು ಎಲ್ಲರ ಆಸೆ. ಅದನ್ನು ಸ್ವಾಗತಿಸುವವನೇ ನಿಜವಾದ ಮನುಷ್ಯ. ಕೇವಲ ಹಿರಿಯರ ಸಿನಿಮಾಗಳಲ್ಲ, ಯುವ ನಟರೂ ಬೆಳೆಯಬೇಕು, ಅವರಿಗೂ ಬೆಂಬಲ ಸಿಗಬೇಕು’ ಎಂದು ಹೇಳಿದರು.