ಸಾಮಾಜಿಕ ಜಾಲತಾಣದಲ್ಲಿ ಸದ್ಯ ಕೊಟ್ಟಿಯೂರು ಕುರಿತ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ಕಳೆದ ವರ್ಷಕ್ಕೂ ಮುನ್ನ ಇಂತಹದ್ದೊಂದು ದೇವಸ್ಥಾನವಿದೆ ಎಂಬುದರ ಅರಿವೂ ಸಹ ಇಲ್ಲದ ಜನರು ಕಳೆದ ವರ್ಷ ಈ ಜಾಗದ ಕುರಿತು ವೈರಲ್ ಆದ ರೀಲ್ಗಳನ್ನು ಕಂಡು ಭಾರೀ ದೊಡ್ಡ ಮಟ್ಟದಲ್ಲಿ ಭೇಟಿ ನೀಡಲು ಆರಂಭಿಸಿದ್ದಾರೆ.
ದೇವಾಲಯದ ಸುತ್ತ ನೀರು, ಆ ನೀರನ್ನೇ ದಾಟಿ ದರ್ಶನ ಪಡೆಯುವ ವಿಡಿಯೊವನ್ನು ಕಂಡ ಜನರು ಇದೊಂಥರ ವಿಭಿನ್ನವಾಗಿದೆಯಲ್ಲ ಎಂಬ ಕಾರಣಕ್ಕೆ ಮನಸೋತು ದೇವಾಲಯದ ಕಡೆ ಮುಖ ಮಾಡಲು ಶುರು ಮಾಡಿದರು.
ಅಲ್ಲದೇ ಈ ದೇವಸ್ಥಾನಕ್ಕೆ ಬರುವವರು ನಾಗರಹೊಳೆ ಅಥವಾ ಬಂಡೀಪುರ ಕಾಡಿನ ಮೂಲಕ ಕರ್ನಾಟಕ – ಕೇರಳ ಗಡಿ ದಾಟಿ ಕೇರಳಕ್ಕೆ ಪ್ರವೇಶ ಪಡೆದುಕೊಳ್ಳಬೇಕಿದ್ದು, ಸಾಗುವ ಹಾದಿ ಸಹ ಕಣ್ಣಿಗೆ ಹಬ್ಬ ಎಂದು ಹೇಳಬಹುದು. ಹೀಗೆ ಹೋಗುವ ಜಾಗ, ಹೋಗುವ ಹಾದಿ ಎಲ್ಲವೂ ಚೆನ್ನಾಗಿದೆ ಎಂಬ ಕಾರಣಕ್ಕೆ ವೈರಲ್ ಆದ ಈ ಜಾಗಕ್ಕೆ ಮೈಸೂರು ಹಾಗೂ ಚಾಮರಾಜನಗರದಿಂದ ನಾಲ್ಕು ಗಂಟೆಗಳಲ್ಲಿ ತಲುಪಿಬಿಡಬಹುದು ಎಂದು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ತೆರಳತೊಡಗಿದರು.
ಸದ್ಯ ಕಳೆದ ವರ್ಷದ ಹಾಗೆ ಈ ವರ್ಷವೂ ಸಹ ಒಂದು ತಿಂಗಳ ಕಾಲ ಈ ದೇವಾಲಯ ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲ್ಪಟ್ಟಿದ್ದು, ಕಳೆದ ವರ್ಷದ ಹಾಗೆರ ಈ ವರ್ಷವೂ ಸಹ ದೊಡ್ಡ ಸಂಖ್ಯೆಯಲ್ಲಿ ರಾಜ್ಯದ ಜನರು ಅಲ್ಲಿಗೆ ತೆರಳಿದ್ದಾರೆ. ಅಲ್ಲದೇ ದೇವಾಲಯದ ಸಿಬ್ಬಂದಿ ವಿರುದ್ಧ ತಮ್ಮ ಜತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ, ಸಾವಿರ ರೂ ಕೊಟ್ಟು ಟಿಕೆಟ್ ಪಡೆದು ತೆರಳಿದರೂ ಸರಿಯಾದ ವ್ಯವಸ್ಥೆ ಇಲ್ಲ, ಮಹಿಳೆಯರ ಜತೆ ಸರಿಯಾಗಿ ನಡೆದುಕೊಳ್ಳದೇ ದರ್ಪ ತೋರುತ್ತಾರೆ ಎಂದು ಕನ್ನಡಿಗರು ಕಿಡಿಕಾರಿದ್ದಾರೆ.
ಇದಕ್ಕೆ ಕೇರಳಿಗರು ಇಲ್ಲಿಗೆ ಬಂದ ಮೇಲೆ ಇಲ್ಲಿನ ನಿಯಮಗಳನ್ನು ಪಾಲಿಸಿ, ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದು, ಕ್ಯೂ ಪಾಲಿಸದಿರುವುದು, ಮನ ಬಂದಂತೆ ಕಿರುಚುವುದು ಮಾಡುತ್ತೀರ ಎಂದು ಕೌಂಟರ್ ಕೊಟ್ಟಿದ್ದಾರೆ. ಅಲ್ಲದೇ ನಿಮ್ಮ ದೇವಾಲಯಗಳನ್ನು ಬಿಟ್ಟು ಇತಿಹಾಸವಿರುವ ನಮ್ಮ ಕಾಡಿನ ದೇವಾಲಯಕ್ಕೆ ಬನ್ನಿ ಎಂದು ನಿಮಗೆ ಹೇಳಿದ್ದು ಯಾರು, ಒಟ್ಟಿಗೆ ಇಷ್ಟು ಜನ ಬಂದರೆ ಹೇಗೆ ಸರಿಯಾದ ವ್ಯವಸ್ಥೆ ಮಾಡಲಾಗುತ್ತದೆ ಎಂದೂ ಸಹ ಕಿಡಿಕಾರಿದ್ದಾರೆ.
ಇದೇ ಸಮಯಕ್ಕೆ ಸರಿಯಾಗಿ ದರ್ಶನ್ ಅಭಿಮಾನಿಗಳು ‘ಪವರ್ಫುಲ್ ಪೀಪಲ್ ಮೇಕ್ಸ್ ಪ್ಲೇಸಸ್ ಪವರ್ಫುಲ್’ ಎಂದು ಸ್ವಾಗ್ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದು, ಕಳೆದ ವರ್ಷ ಜೂನ್ ತಿಂಗಳಲ್ಲಿ ದರ್ಶನ್ ಭೇಟಿ ನೀಡಿದ್ದಕ್ಕೆ ಈ ತಾಣ ಇಷ್ಟು ಖ್ಯಾತಿ ಪಡೆಯಿತು ಎಂದಿದ್ದಾರೆ.
ಹೀಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಈ ಕುರಿತು ಹಲವಾರು ಮಂದಿ ಪ್ರತಿಕ್ರಿಯಿಸಿ ನಮ್ಮ ರಾಜ್ಯದಲ್ಲೇ ಹಲವಾರು ಶಿವನ ದೇವಾಲಯಗಳಿವೆ, ಕೊಟ್ಟಿಯೂರಿಗೆ ಹೋಗಬೇಕು ಎನ್ನುವ ನಿಯಮವಿಲ್ಲ, ಅಲ್ಲಿಗೆ ಹೋಗಿ ಮರ್ಯಾದೆ ಇಲ್ಲ ಎಂದು ಅಳುವ ಬದಲು ರಾಜ್ಯದಲ್ಲೇ ಇರುವ ದೇವಾಲಯಗಳಿಗೆ ಭೇಟಿ ನೀಡಿ ಎಂದು ಬುದ್ದಿವಾದ ಹೇಳಿದ್ದಾರೆ. ಹಾಗೆಯೇ ದರ್ಶನ್ ಹೋಗಿದ್ದ ದೇವಸ್ಥಾನ ಎಂಬ ಕಾರಣಕ್ಕೆ ತೆರಳುತ್ತಿರುವವರ ಕುರಿತು ಮಿಸ್ಟರ್ ಐಜಿ ಎಂಬ ಎಕ್ಸ್ ಬಳಕೆದಾರ ಟ್ವೀಟ್ ಮಾಡಿದ್ದು, ‘ದುರಾದೃಷ್ಟವಷಾತ್ ಇಲ್ಲಿಗೆ ಭೇಟಿ ನೀಡಿದ ಬಳಿಕ ದರ್ಶನ್ ಜೀವನವೇನೂ ಸರಿಯಾಗಲಿಲ್ಲ. ಬೇಲ್ ಮೇಲೆ ಹೊರಗಿದ್ದ ದರ್ಶನ್ ಮತ್ತೆ ಜೈಲುಪಾಲಾದರು. ಅಷ್ಟು ಗುಂಪಿರುವ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಜೀವವನ್ನು ರಿಸ್ಕ್ ಮಾಡಿಕೊಳ್ಳಬೇಡಿ. ನಿಮ್ಮ ರಾಜ್ಯದಲ್ಲಿರುವ ದೇವಾಲಯಗಳಿಗೆ ಹೋಗಿ, ನಿಮ್ಮ ಮನೆ ದೇವರಿಗೆ ಹೋಗಿ. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುವ ದೇವಾಲಯಗಳಿಗೆ ಹೋಗುವುದನ್ನು ನಿಲ್ಲಿಸಿ’ ಎಂದು ಬರೆದುಕೊಂಡಿದ್ದಾರೆ.