ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಕಲಾವಿದರಿಗೆ ಹಾಗೂ ಅವರ ಕುಟುಂಬಗಳಿಗೆ ಕಿರುಕುಳ ನೀಡುವುದು ಹೊಸ ಸುದ್ದಿಯೇನಲ್ಲ. ಆದರೆ ಅದು ಇತ್ತೀಚೆಗಿನ ದಿನಗಳಲ್ಲಿ ತೀರ ವೈಯಕ್ತಿಕವಾಗುತ್ತಿದ್ದು, ಇಲ್ಲಸಲ್ಲದ ವಿಷಯಗಳನ್ನು ಹಾಕಿ ತೇಜೋವಧೆ ಮಾಡಲಾರಂಭಿಸಿದ್ದಾರೆ.
ನಿಮ್ಮ ಮೇಲಿನ ನಟನ ಪ್ರೀತಿ ಬೇರೆ ನಟನ ಮೇಲೆ ದ್ವೇಷವಾಗಿ ಪರಿವರ್ತನೆಯಾಗದಿರಲಿ ಎಂದು ಎಷ್ಟೇ ಹೇಳಿದರೂ ಕೇಳದ ಕೆಲ ಅನಕ್ಷರಸ್ಥ ಅಭಿಮಾನಿಗಳು ಹುಚ್ಚು ನೆತ್ತಿಗೇರಿ ಬಾಯಿಗೆ ಬಂದದ್ದನ್ನು ಬರೆದು ಪೋಸ್ಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡು ಕೊನೆಗೆ ಜೈಲು ಪಾಲಾಗಿದ್ದಾರೆ.
ಸದ್ಯ ಅಂತಹದ್ದೇ ಒಂದು ಘಟನೆ ನಡೆದಿದ್ದು, ಕಿಡಿಗೇಡಿಯೊಬ್ಬ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರನ್ನು ಬಾಯಿ ತುಂಬಾ ಅತ್ತಿಗೆ ಎಂದು ಕರೆಯುವ ನಟ ಧನ್ವೀರ್ಗೂ ಸಂಬಂಧ ಇದೆ ಎಂದು ಪೋಸ್ಟ್ ಹಂಚಿಕೊಂಡು ವಿವಾದ ಎಬ್ಬಿಸಿದ್ದಾನೆ.
ಎಕ್ಸ್ ವೇದಿಕೆಯಲ್ಲಿ ಜಲಗಾರ ಯೂನಿವರ್ಸಿಟಿ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಲವು ದಿನಗಳಿಂದ ದರ್ಶನ್ ಹಾಗೂ ಅವರ ಕುಟುಂಬದ ವಿರುದ್ಧ ಟ್ರೋಲ್ ಪೋಸ್ಟ್ಗಳನ್ನು ಹಾಕುತ್ತಾ ಬಂದಿದ್ದಾನೆ.
ಹೀಗೆ ದರ್ಶನ್ ವಿರುದ್ಧ ದ್ವೇಷ ಸಾಧಿಸುತ್ತಾ ಬಂದಿದ್ದ ಈತನ ಸಮಯ ಮುಗಿಯುವ ಹಂತಕ್ಕೆ ಬಂದಿದ್ದು, ಈತ ಇತ್ತೀಚೆಗಷ್ಟೆ ಇವರೇ ನೋಡಿ ಕ್ರಿಮಿನಲ್ ದರ್ಶನ್ ಹೆಂಡತಿ, ಗಂಡ ಜೈಲಿನಲ್ಲಿದ್ದರೆ ಈಕೆ ಬಾಯ್ಫ್ರೆಂಡ್ ಜತೆ ಸುತ್ತಾಟ ನಡೆಸುತ್ತಿದ್ದಾಳೆ ಎಂದು ಬರೆದುಕೊಂಡು ಅನೇಕ ಅಶ್ಲೀಲ ಪದಗಳನ್ನು ಬಳಸಿ ವಿಜಯಲಕ್ಷ್ಮಿ ಮಗನ ಕುರಿತೂ ಸಹ ವಿಕೃತಿ ಮೆರೆದಿದ್ದಾನೆ.
ಈ ಪೋಸ್ಟ್ನಲ್ಲಿ ವಿಜಯಲಕ್ಷ್ಮಿ ಧನ್ವೀರ್ ಜತೆ ತೆರಳಿ ದರ್ಶನ್ ಅಭಿನಯದ ಡೆವಿಲ್ ಚಿತ್ರವನ್ನು ವೀಕ್ಷಿಸಿದ್ದ ವಿಡಿಯೊವನ್ನು ಬಳಿಸಿಕೊಂಡು ಕೆಟ್ಟದಾಗಿ ಬರೆಯಲಾಗಿದ್ದು, ಕೊನೆಗೆ ವಿಜಯಲಕ್ಷ್ಮಿ ಅವರಿಗೆ ದೂರು ನೀಡಬೇಡಿ ಎಂದು ಹೇಳಿ ಎಂದು ಸಹ ವ್ಯಂಗ್ಯವಾಡಿದ್ದ.
ಅದಕ್ಕೆ ತಕ್ಕ ಹಾಗೆ ವಿಜಯಲಕ್ಷ್ಮಿ ದರ್ಶನ್ ದೂರು ನೀಡಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಖಾತೆ ತೆರೆದಿದ್ದ ಕಿಡಿಗೇಡಿ ಆ ಖಾತೆಯನ್ನು ನಿಷ್ಕ್ರಿಯಗೊಳಿಸಿ ಹೆದರಿ ಓಡಿದ್ದಾನೆ. ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದು, ಈ ವಿಕೃತ ಮನಸ್ಥಿತಿ ಹೊಂದಿರುವ ವ್ಯಕ್ತಿ ಯಾರು ಎಂಬುದು ಶೀಘ್ರದಲ್ಲೇ ತಿಳಿದುಬರಲಿದೆ.