ಬಾಲಿವುಡ್ ಅಂಗಳದ ಒಂದು ಕಾಲದ ಬಹುಚರ್ಚಿತ ಜೋಡಿ ಎಂದರೆ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್. ಇವರಿಬ್ಬರ ಪ್ರೀತಿ ಶುರುವಾಗಿದ್ದು ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ ಚಿತ್ರದ ಸೆಟ್ ನಿಂದಲೇ ಎಂಬ ಮಾತುಗಳು ಬಿಟೌನ್ ನಲ್ಲಿ ದಟ್ಟವಾಗಿವೆ. ಆದರೆ ಈ ಬಗ್ಗೆ ಚಿತ್ರದಲ್ಲಿ ನಟಿಸಿದ್ದ ಸಹ ನಟ ವಿಶ್ವನಾಥ್ ಇತ್ತೀಚಿನ ಸಂದರ್ಶನವೊಂದರಲ್ಲಿ ಕೆಲವೊಂದು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರ ಪಾಡ್ಕಾಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ವಿಶ್ವನಾಥ್ ಅವರಿಗೆ, ರಣಬೀರ್ ಹಾಗೂ ಕತ್ರಿನಾ ಪ್ರೀತಿ ನಿಜಕ್ಕೂ ಆ ಸೆಟ್ ನಲ್ಲೇ ಶುರುವಾಗಿತ್ತಾ ಮತ್ತು ನೀವು ಅಲ್ಲಿ ಏನನ್ನು ಗಮನಿಸಿದ್ದಿರಿ ಎಂಬ ಪ್ರಶ್ನೆ ಎದುರಾಯಿತು.
ಇದಕ್ಕೆ ನಗುತ್ತಲೇ ಉತ್ತರಿಸಿದ ವಿಶ್ವನಾಥ್, ಸಿನಿಮಾ ಸೆಟ್ ನಲ್ಲಿ ಅಂತಹ ಯಾವುದೇ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಿತ್ರದ ನಿರ್ದೇಶಕ ರಾಜಕುಮಾರ್ ಸಂತೋಷಿ ಅವರು ಸೆಟ್ ನಲ್ಲಿ ಇರುವಾಗ ಯಾರೂ ಕೂಡ ಇಂತಹ ವಿಷಯಗಳಿಗೆ ಆಸ್ಪದ ನೀಡುತ್ತಿರಲಿಲ್ಲ. ಅವರ ಮುಂದೆ ಎಲ್ಲರೂ ಶಿಸ್ತಿನ ಸಿಪಾಯಿಗಳಂತೆ ಇರುತ್ತಿದ್ದರು. ರಾಜಕುಮಾರ್ ಸಂತೋಷಿ ಅವರು ಸಿಂಹದ ತರಹ, ಅವರು ಕಲಾವಿದರನ್ನು ಕಥೆ ಮತ್ತು ಪಾತ್ರಗಳಲ್ಲಿ ಸಂಪೂರ್ಣವಾಗಿ ಮುಳುಗುವಂತೆ ಮಾಡುತ್ತಿದ್ದರು. ಹಾಗಾಗಿ ನಮಗೆ ಅಲ್ಲಿ ಅಂತಹ ಯಾವುದೇ ಪ್ರೇಮ ಪ್ರಕರಣಗಳು ಕಾಣಿಸಲಿಲ್ಲ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಟಿ ಕತ್ರಿನಾ ಕೈಫ್ ಅವರ ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ವಿಶ್ವನಾಥ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಕತ್ರಿನಾ ಅವರ ದೈಹಿಕ ಫಿಟ್ನೆಸ್ ಮತ್ತು ಸಿನಿಮಾ ಮೇಲಿರುವ ಸಮರ್ಪಣಾ ಭಾವವನ್ನು ಕಂಡು ರಣಬೀರ್ ಕಪೂರ್ ಸೇರಿದಂತೆ ಸೆಟ್ ನಲ್ಲಿದ್ದ ನಾವೆಲ್ಲರೂ ಆಶ್ಚರ್ಯಚಕಿತರಾಗಿದ್ದೆವು. ದೋಣಿಯಿಂದ ಏಣಿಯ ಮೂಲಕ ಸೇತುವೆಯನ್ನು ಹತ್ತುವ ಒಂದು ದೃಶ್ಯವಿತ್ತು, ಕತ್ರಿನಾ ಅದನ್ನು ಅತ್ಯಂತ ವೇಗವಾಗಿ ಹತ್ತಿ ಮುಗಿಸಿದರು. ಅಷ್ಟೇ ಅಲ್ಲದೆ ಚಿತ್ರದ ಸಂಭಾಷಣೆಗಳಿಗಾಗಿಯೂ ಅವರು ಸಾಕಷ್ಟು ಹೋರಾಟ ನಡೆಸಿ ಸೈ ಎನಿಸಿಕೊಂಡಿದ್ದರು. ಚಿತ್ರತಂಡದಲ್ಲಿ ಅತ್ಯಂತ ಹೆಚ್ಚು ಶ್ರದ್ಧೆ ಹೊಂದಿದ್ದ ನಟಿ ಎಂದರೆ ಅದು ಕತ್ರಿನಾ ಮಾತ್ರ ಎಂದು ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಅಂದಹಾಗೆ, ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಈ ಚಿತ್ರದ ಬಳಿಕ ರಾಜನೀತಿ ಹಾಗೂ ಜಗ್ಗಾ ಜಾಸೂಸ್ ಸಿನಿಮಾಗಳಲ್ಲೂ ಒಟ್ಟಿಗೆ ನಟಿಸಿದ್ದರು. ಸುಮಾರು ಆರು ವರ್ಷಗಳ ಕಾಲ ರಿಲೇಶನ್ಶಿಪ್ನಲ್ಲಿದ್ದ ಈ ಜೋಡಿ 2016 ರ ಸುಮಾರಿಗೆ ಬ್ರೇಕಪ್ ಮಾಡಿಕೊಂಡಿತು. ಸದ್ಯ ಕತ್ರಿನಾ ಕೈಫ್ ಅವರು ನಟ ವಿಕ್ಕಿ ಕೌಶಲ್ ಅವರನ್ನು ವಿವಾಹವಾಗಿದ್ದರೆ, ರಣಬೀರ್ ಕಪೂರ್ ಅವರು ಆಲಿಯಾ ಭಟ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.