ನವದೆಹಲಿ: ಕೃಷಿ ಕ್ಷೇತ್ರದಲ್ಲಿ ನೀರಾವರಿ ಅತ್ಯಂತ ಪ್ರಮುಖ ಅಂಶವಾಗಿದೆ. ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರು ಒದಗಿಸಲು ವಿದ್ಯುತ್ ಅಗತ್ಯವಿದ್ದರೂ, ಆಗಾಗ್ಗೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾಭಿಯಾನ್ (PM-KUSUM) ಯೋಜನೆಯಡಿ ರೈತರಿಗೆ ಸೌರಶಕ್ತಿ ಆಧಾರಿತ ನೀರಾವರಿ ಪಂಪ್ಗಳನ್ನು ಅಳವಡಿಸಿಕೊಳ್ಳಲು ಭಾರೀ ಸಬ್ಸಿಡಿ ನೀಡುತ್ತಿದೆ.
60%ವರೆಗೆ ಸಬ್ಸಿಡಿ, 30%ವರೆಗೆ ಬ್ಯಾಂಕ್ ಸಾಲ
ಈ ಯೋಜನೆಯಡಿ ಸೌರ ಪಂಪ್ ಅಳವಡಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಆರ್ಥಿಕ ನೆರವು ನೀಡುತ್ತಿವೆ. ಸಾಮಾನ್ಯವಾಗಿ ರೈತರಿಗೆ 60%ವರೆಗೆ ಸಬ್ಸಿಡಿ ದೊರೆಯುತ್ತದೆ. ಜೊತೆಗೆ 30%ವರೆಗೆ ಕಡಿಮೆ ಬಡ್ಡಿದರದ ಬ್ಯಾಂಕ್ ಸಾಲ ಸೌಲಭ್ಯವೂ ಲಭ್ಯವಿದೆ. ಹೀಗಾಗಿ ರೈತರು ಕೇವಲ 10% ಮೊತ್ತವನ್ನು ಮಾತ್ರ ಸ್ವಂತವಾಗಿ ಭರಿಸಿದರೆ ಸಾಕು.ಕೆಲವು ರಾಜ್ಯಗಳಲ್ಲಿ ವಿಶೇಷ ನಿಯಮಗಳ ಪ್ರಕಾರ ಸಣ್ಣ ಮತ್ತು ಅತಿಸಣ್ಣ ರೈತರಿಗೆ 90%ವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
ಯಾವ ರಾಜ್ಯಗಳಲ್ಲಿ ವಿಶೇಷ ಸೌಲಭ್ಯ?
ಉತ್ತರ ಪ್ರದೇಶ, ಹರಿಯಾಣ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಸೌರ ಪಂಪ್ಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ. ಈಶಾನ್ಯ ರಾಜ್ಯಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಇನ್ನಷ್ಟು ಹೆಚ್ಚಿನ ಆರ್ಥಿಕ ನೆರವು ಒದಗಿಸುತ್ತಿದೆ. ಇದರಿಂದ ರೈತರ ವಿದ್ಯುತ್ ವೆಚ್ಚ ಕಡಿಮೆಯಾಗುವುದರ ಜೊತೆಗೆ ನಿರಂತರ ನೀರಾವರಿ ಸೌಲಭ್ಯವೂ ದೊರೆಯಲಿದೆ.
ಸೌರ ಪಂಪ್ ಬೆಲೆ ಎಷ್ಟು?
ಸೌರ ಪಂಪ್ನ ಬೆಲೆ ಅದರ HP (ಹಾರ್ಸ್ಪವರ್) ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.
- 3 HP ಸೌರ ಪಂಪ್: ಮಾರುಕಟ್ಟೆ ಬೆಲೆ ಸುಮಾರು ₹1.5 ಲಕ್ಷದಿಂದ ₹1.8 ಲಕ್ಷ. ಸಬ್ಸಿಡಿ ನಂತರ ರೈತರಿಗೆ ಸುಮಾರು ₹40,000 ರಿಂದ ₹45,000 ವೆಚ್ಚವಾಗಬಹುದು.
- 5 HP ಸೌರ ಪಂಪ್: ಮೂಲ ಬೆಲೆ ₹3 ಲಕ್ಷಕ್ಕೂ ಹೆಚ್ಚು. ಸಬ್ಸಿಡಿ ಬಳಿಕ ರೈತರು ಸುಮಾರು ₹60,000 ರಿಂದ ₹65,000 ಮಾತ್ರ ಪಾವತಿಸಬೇಕಾಗುತ್ತದೆ.
- 7.5 HP ರಿಂದ 10 HP ಸೌರ ಪಂಪ್: ದೊಡ್ಡ ಕೃಷಿಭೂಮಿಗಳಿಗೆ ಬಳಸುವ ಈ ಪಂಪ್ಗಳ ಬೆಲೆ ಸಬ್ಸಿಡಿ ನಂತರ ಸುಮಾರು ₹85,000 ರಿಂದ ₹1.15 ಲಕ್ಷವರೆಗೆ ಇರಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
PM-KUSUM ಯೋಜನೆಯ ಲಾಭ ಪಡೆಯಲು ರೈತರು ತಮ್ಮ ರಾಜ್ಯ ಸರ್ಕಾರ ನಿಗದಿಪಡಿಸಿರುವ ಅರ್ಜಿ ಪ್ರಕ್ರಿಯೆಯನ್ನು ಅನುಸರಿಸಬೇಕು. ಅರ್ಜಿ ವಿಧಾನವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.
- ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು PM-KUSUM ಅಧಿಕೃತ ಪೋರ್ಟಲ್ ಮೂಲಕ ಪರಿಶೀಲಿಸಬಹುದು.
- ಅಥವಾ ಸಮೀಪದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
ಯೋಜನೆಯ ಪ್ರಮುಖ ಉದ್ದೇಶ
ಸೌರ ಪಂಪ್ಗಳ ಬಳಕೆಯಿಂದ ರೈತರು ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬಹುದು. ದೀರ್ಘಾವಧಿಯಲ್ಲಿ ಕೃಷಿ ವೆಚ್ಚವೂ ಇಳಿಕೆಯಾಗುತ್ತದೆ. ಜೊತೆಗೆ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸಿ ರೈತರ ಆದಾಯವನ್ನು ಹೆಚ್ಚಿಸುವುದೇ PM-KUSUM ಯೋಜನೆಯ ಪ್ರಮುಖ ಉದ್ದೇಶವಾಗಿದೆ.