ಧಾರವಾಡ: ಜಿಲ್ಲೆಯಲ್ಲಿ ಗಣಪತಿ ಬಪ್ಪನ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕಾ ಕ್ರಮವಾಗಿ ವಿವಿಧ ತಾಲೂಕುಗಳಲ್ಲಿ ನಿಯಮಿತವಾಗಿ ಮದ್ಯ ಮಾರಾಟ, ಸಾಗಾಣಿಕೆ ಹಾಗೂ ಸೇವನೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಸ್ನೇಹಲ್ ಆರ್. ಅವರು ಖಡಕ್ ಆದೇಶ ಹೊರಡಿಸಿದ್ದಾರೆ.
ಹಬ್ಬದ ವಿಸರ್ಜನಾ ದಿನಗಳ ಆಧಾರದ ಮೇಲೆ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ಅಳ್ನಾವರ, ಕಲಘಟಗಿ, ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ ತಾಲೂಕುಗಳಲ್ಲಿ ಸೆಪ್ಟೆಂಬರ್ 13 ರಿಂದ ಸೆಪ್ಟೆಂಬರ್ 27 ರವರೆಗಿನ ನಿಗದಿತ ಅವಧಿಗಳಲ್ಲಿ ಹಂತ-ಹಂತವಾಗಿ ಈ ಒಣದಿನ (Dry Days) ನಿಯಮ ಜಾರಿಯಲ್ಲಿರಲಿದೆ.
ತಾಲೂಕುವಾರು ಮದ್ಯ ನಿಷೇಧದ ವೇಳಾಪಟ್ಟಿ ಹೀಗಿದೆ:
ಹುಬ್ಬಳ್ಳಿ ತಾಲೂಕು (ಮೊದಲ 3 ದಿನಗಳು):
-
ಅವಧಿ: ಸೆಪ್ಟೆಂಬರ್ 13 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 17 ರ ಬೆಳಿಗ್ಗೆ 6:00 ಗಂಟೆಯವರೆಗೆ ಸಂಪೂರ್ಣ ಮದ್ಯ ಮಾರಾಟ ಹಾಗೂ ಸಾಗಾಟ ಬಂದ್.
ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳು (ವಿಸರ್ಜನಾ ದಿನಗಳ ಪ್ರಕಾರ):
-
1ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 13 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 15 ರ ಬೆಳಿಗ್ಗೆ 06:00 ರವರೆಗೆ.
-
5ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 17 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 19 ರ ಬೆಳಿಗ್ಗೆ 06:00 ರವರೆಗೆ.
-
7ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 19 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 21 ರ ಬೆಳಿಗ್ಗೆ 06:00 ರವರೆಗೆ.
-
9ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 21 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 23 ರ ಬೆಳಿಗ್ಗೆ 06:00 ರವರೆಗೆ.
-
11ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 23 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 25 ರ ಬೆಳಿಗ್ಗೆ 06:00 ರವರೆಗೆ.
-
13ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 25 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 27 ರ ಬೆಳಿಗ್ಗೆ 06:00 ರವರೆಗೆ.
ಉತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಗಲಭೆ ಮುಕ್ತ ವಾತಾವರಣ ನಿರ್ಮಿಸಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.