ಹೈದರಾಬಾದ್ ಮೂಲದ ಇನ್ಫ್ಲುಯೆನ್ಸರ್ ಅಹಲ್ಯಾ ಎಂಬುವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ತೆಲುಗು ವ್ಯಕ್ತಿಗೆ ಮತ್ತೊಬ್ಬ ತೆಲುಗು ವ್ಯಕ್ತಿಯೇ ಏಕೈಕ ಶತ್ರು” ಎಂಬ ಶೀರ್ಷಿಕೆಯಡಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ತಮ್ಮದೇ ಸಮುದಾಯದ ಜನರು ಒಬ್ಬರನ್ನೊಬ್ಬರು ಬೆಂಬಲಿಸುವುದಿಲ್ಲ, ಯಾರಾದರೂ ಹೊಸ ಉದ್ದಿಮೆ ಅಥವಾ ವಿಭಿನ್ನವಾಗಿ ಏನಾದರೂ ಸಾಧಿಸಲು ಹೊರಟರೆ ಪ್ರೋತ್ಸಾಹಿಸುವ ಬದಲು ಕೀಳಾಗಿ ಕಾಣುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಡಿಯೋಗೆ ಕಾಮೆಂಟ್ ಮಾಡಿರುವ ನಟಿ ಶೋಭಿತಾ ಧುಳಿಪಾಲ, ತಮ್ಮ ಸ್ವಂತ ಸಮುದಾಯದ ಈ ಸಣ್ಣ ಮನಸ್ಥಿತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋಗೆ ‘100’ ಇಮೋಜಿ ಬೆಂಬಲ ನೀಡಿದ ಶೋಭಿತಾ, ತಾವು ತಮ್ಮ 16ನೇ ವಯಸ್ಸಿನಲ್ಲಿಯೇ ಆಂಧ್ರಪ್ರದೇಶದಿಂದ ಮುಂಬೈಗೆ ಏಕೆ ಓಡಿಹೋದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ತೆಲುಗು ಸಮಾಜದಲ್ಲಿ ಯಾರಾದರೂ ಹೊಸ ಕನಸು ಕಂಡರೆ ಅವರನ್ನು ತಡೆಯುವ ಮತ್ತು ಪ್ರತಿಯೊಂದಕ್ಕೂ ಜಡ್ಜ್ (ತೀರ್ಪು ನೀಡುವ) ಮಾಡುವ ವಾತಾವರಣವಿದೆ. ಯಾವುದೇ ರಂಗದಲ್ಲೂ ಗಾಡ್ಫಾದರ್ ಇಲ್ಲದ ಹೊರಗಿನವರು ಬರಲು ಇಲ್ಲಿ ಅವಕಾಶ ಕೊಡುವುದಿಲ್ಲ. ಅದರಲ್ಲೂ ಮಹಿಳೆಯರಿಗೆ ಈ ರೀತಿಯ ಕಿರುಕುಳ ಅಥವಾ ಅಡೆತಡೆಗಳು ಎರಡಷ್ಟಿರುತ್ತವೆ ಎಂದು ಹೇಳಿದ್ದಾರೆ. ಈಗಲಾದರೂ ಪರಿಸ್ಥಿತಿ ಬದಲಾಗಿದೆ ಎಂದು ಭಾವಿಸುತ್ತೇನೆ, ನಮ್ಮ ಸಮುದಾಯದ ಪ್ರತಿಯೊಬ್ಬರೂ ಇತರರಿಗೆ ಬೆಳೆಯಲು ರೆಕ್ಕೆಗಳನ್ನು ಮತ್ತು ಸ್ವಂತವಾಗಿ ನಿಲ್ಲಲು ಬೆನ್ನೆಲುಬನ್ನು ಬೆಳೆಸಿಕೊಳ್ಳಲಿ ಎಂದು ಅವರು ಹಾರೈಸಿದ್ದಾರೆ.
ಆಂಧ್ರಪ್ರದೇಶದ ತೆನಾಲಿಯಲ್ಲಿ ಜನಿಸಿದ ಶೋಭಿತಾ ಧುಳಿಪಾಲ, ಮಿಸ್ ಅರ್ಥ್ 2013 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅನುರಾಗ್ ಕಶ್ಯಪ್ ಅವರ ‘ರಾಮನ್ ರಾಘವ್ 2.0’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ‘ಮೇಡ್ ಇನ್ ಹೆವನ್’, ‘ದಿ ನೈಟ್ ಮ್ಯಾನೇಜರ್’, ‘ಪೊನ್ನಿಯಿನ್ ಸೆಲ್ವನ್’ ನಂತಹ ಸೂಪರ್ ಹಿಟ್ ಪ್ರಾಜೆಕ್ಟ್ಗಳಲ್ಲಿ ನಟಿಸಿದ್ದಾರೆ. ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿರುವ ಶೋಭಿತಾ, ಇತ್ತೀಚೆಗೆ ‘ಚೀಕಟಿಲೊ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.