ನಿನ್ನೆ ( ಸೆಪ್ಟೆಂಬರ್ 16 ) ಕನ್ನಡ ಚಿತ್ರರಂಗದ ಪಾಲಿಗೆ ಐತಿಹಾಸಿಕ ದಿನವೆಂದರೆ ತಪ್ಪಾಗಲಾರದು. ಏಕೆಂದರೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ದಾದಾ ಸಾಹೇಬ್ ಫಾಲ್ಕೆ ಗೌರವ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಒಲಿದು ಬಂದಿದೆ.
1973ರಲ್ಲಿ ತೆರೆಗೆ ಬಂದ ಸಂಕಲ್ಪ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಅನಂತ್ನಾಗ್ ಕಾಲ ಕಳೆದಂತೆ ಸ್ಟಾರ್ ನಟರ ಪಟ್ಟಿ ಸೇರಿದರು. ಕಲಾತ್ಮಕ ಚಿತ್ರಗಳು, ಕಾದಂಬರಿ ಆಧಾರಿತ ಚಿತ್ರಗಳು, ಸಸ್ಪೆನ್ಸ್ ಚಿತ್ರಗಳು ಮಾತ್ರವಲ್ಲದೇ ಹಾಸ್ಯಮಯ ಚಿತ್ರಗಳಲ್ಲೂ ನಟಿಸಿ ಗೆದ್ದು ಕನ್ನಡದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ ಅನಂತ್ ನಾಗ್ ವಯಸ್ಸಾದ ಬಳಿಕವೂ ನಟನೆಯಿಂದ ಹಿಂದೆ ಸರಿಯದ ಅನಂತ್ನಾಗ್ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಕಲಾಸೇವೆಯನ್ನು ಮುಂದುವರಿಸಿದರು.
ಹೀಗೆ ವಿಭಿನ್ನ ಕೆಟಗರಿಯ ಚಿತ್ರಗಳು, ಯಾವುದೇ ಪಾತ್ರವಾದರೂ ನಟಿಸಿ ಅದಕ್ಕೆ ನ್ಯಾಯ ಒದಗಿಸಿದ ಅನಂತ್ನಾಗ್ ಕನ್ನಡ ಚಿತ್ರರಂಗದ ಮೇರುನಟರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಅಪಾರವಾದ ಗೌರವವನ್ನು ಹೊಂದಿದ್ದಾರೆ.
ಇಂತಹ ಮಹಾನ್ ಕಲಾವಿದನಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದ್ದನ್ನು ಕನ್ನಡಿಗರು ತುಂಬು ಹೃದಯದಿಂದ ಸಂಭ್ರಮಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೀಗೆ ಒಂದೆಡೆ ಅನಂತ್ನಾಗ್ಗೆ ಈ ಮಹಾ ಗೌರವ ಲಭಿಸಿದ್ದಕ್ಕೆ ಸಂಭ್ರಮ ಮನೆಮಾಡಿದ್ದರೆ, ಇನ್ನೂ ಕೆಲವರು ಇದಕ್ಕೆ ರಾಜಕೀಯ ಆಯಾಮ ನೀಡಿ ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಅನಂತ್ನಾಗ್ ಮೋದಿಯನ್ನು ಹೊಗಳಿದ್ದರು, ಹೀಗೆ ಹೊಗಳಿದ ಮುಂದಿನ ತಿಂಗಳೇ ಅನಂತ್ನಾಗ್ಗೆ ಈ ಪ್ರಶಸ್ತಿ ಲಭಿಸಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಅಂದಿನ ಅನಂತ್ನಾಗ್ ಭಾಷಣದ ವಿಡಿಯೊ ಹಂಚಿಕೊಂಡು ಈ ನಟನೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕಡಿಮೆ ಎಂದು ವ್ಯಂಗ್ಯವಾಡುತ್ತಿದ್ದಾರೆ.
ಅನಂತ್ನಾಗ್ ಏನು ಹೇಳಿದ್ದರು?
ಅಂದು ಅನಂತ್ನಾಗ್ ದೆಹಲಿಯಲ್ಲಿ ನಡೆದ ಜೆನ್ಝೀಗಳ ಹೋರಾಟ ಹಾಗೂ ಅದಕ್ಕೆ ಮೋದಿ ನೀಡಿದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಮಾತನಾಡಿದ್ದರು. ನಾವು ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳನ್ನು ಇಂದಿನ ತಲೆಮಾರು ಅನುಭವಿಸುತ್ತಿಲ್ಲ, ಅವರಿಗೆ ಎಲ್ಲವೂ ಸುಲಭವಾಗಿ ಸಿಗುತ್ತಿದೆ ಎಂದ ಅನಂತ್ನಾಗ್ ಜೆನ್ಝಿ ಪ್ರತಿಭಟನೆ ಯಾವುದೇ ಹಳ್ಳಿಗಳಲ್ಲಿ ಆದ ಪ್ರತಿಭಟನೆಯಲ್ಲ, ಇದು ಪಟ್ಟಣದಲ್ಲಿ ಹರಡಿದ ರೋಗ ಎಂದಿದ್ದರು. ಹಾಗೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಜೆನ್ಝೀಗಳ ಕ್ಷಮೆ ಕೋರಿದಾಗ ನನಗೆ ನೋವಾಯಿತು, ನನ್ನ ಕೆನ್ನೆಗೆ ನಾನೇ ಹೊಡೆದುಕೊಂಡೆ, ಅವರ ಮನಸ್ಸು ದೊಡ್ಡದು, ನಾನಾಗಿದ್ದರೆ ಕ್ಷಮೆ ಕೋರುತ್ತಿರಲಿಲ್ಲ ಎಂದೂ ಸಹ ಅನಂತ್ನಾಗ್ ಹೇಳಿದ್ದರು. ಅಲ್ಲದೇ ನಮ್ಮ ದೇಶದಲ್ಲಿ ಆಡಳಿತವೆಂದರೆ ಮೋದಿಯನ್ನು ಮೀರಿಸುವವರು ಯಾರಾದರೂ ಇದ್ದಾರಾ? ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಇಪ್ಪತ್ತಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಅವರ ಹಾಗೆ ಈ ದೇಶದಲ್ಲಿ ಹಿಂದೆ ಯಾರೂ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ ಎಂದಿದ್ದರು.
ರಾಜಕೀಯಕ್ಕೆ ಧುಮುಕಿದ್ರೆ ಕಲೆಗೆ ಬೆಲೆ ಇಲ್ಲವೇ?
ಸದ್ಯ ಅನಂತ್ನಾಗ್ ಅವರಿಗೆ ಸಂದ ಈ ಗೌರವಕ್ಕೆ ಹೊಗಳಿಕೆ ಮಾತ್ರವಲ್ಲದೇ ಟ್ರೋಲ್ಗಳೂ ಸಹ ವ್ಯಕ್ತವಾಗುತ್ತಿದ್ದು, ರಾಜಕೀಯಕ್ಕೆ ಸೇರುವ ಮುನ್ನ ಶೂನ್ಯ ಟೀಕಾಕಾರರನ್ನು ಹೊಂದಿದ್ದ ನಟನಿಗೆ ಈಗ ಟೀಕೆಗಳು ವ್ಯಕ್ತವಾಗುತ್ತಿರುವುದನ್ನು ಕಂಡರೆ ಒಂದು ರಾಜಕೀಯ ಪ್ರವೇಶದಿಂದ ಕಲೆಗೆ ಸಿಕ್ಕಿದ್ದ ಬೆಲೆಯನ್ನು ಕಡಿಮೆ ಮಾಡಿಬಿಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಇನ್ನು ಕಳೆದ ವರ್ಷ ಅನಂತ್ನಾಗ್ಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದಾಗಲೂ ಇದೇ ರೀತಿಯ ಟೀಕೆಗಳು ವ್ಯಕ್ತವಾಗಿದ್ದವು. ಅನಂತ್ನಾಗ್ ಬಿಜೆಪಿ ಸೇರಿದ ಎರಡೇ ವರ್ಷಕ್ಕೆ ಈ ಪ್ರಶಸ್ತಿ ಲಭಿಸಿತು ಎಂದು ವ್ಯಂಗ್ಯವಾಡಿದ್ದರು. ಇನ್ನು ರಾಜಕೀಯದಲ್ಲಿ ತೊಡಗಿಸಿಕೊಂಡ ಮಾತ್ರಕ್ಕೆ ನಟರ ಕಲೆಯನ್ನು ಕಡೆಗಣಿಸಿ, ಅವರ ಶ್ರಮವನ್ನು ಮರೆತು ರಾಜಕೀಯದಿಂದ ಪ್ರಶಸ್ತಿ ಬಂತು ಎನ್ನುವುದು ಎಷ್ಟು ಸರಿ ಎಂಬ ಟೀಕೆಗಳೂ ಸಹ ಎದ್ದಿವೆ.