ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಭಾರಿ ವಿವಾದ ಸೃಷ್ಟಿಸಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆಗಿನ ಹಳೆಯ ಛಾಯಾಚಿತ್ರದ ಕುರಿತು ಹಿರಿಯ ಬಾಲಿವುಡ್ ನಟಿ ಮಂದಾಕಿನಿ ವರ್ಷಗಳ ಬಳಿಕ ಬಹಿರಂಗವಾಗಿ ಮಾತನಾಡಿದ್ದಾರೆ. ತಾವು ದಾವೂದ್ ಆಹ್ವಾನದ ಮೇರೆಗೆ ದುಬೈಗೆ ಹೋಗಿರಲಿಲ್ಲ ಹಾಗೂ ಕೇವಲ ಒಂದು ಪ್ರದರ್ಶನಕ್ಕಾಗಿ ಅಲ್ಲಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಕಹಿ ನೆನಪನ್ನು ಹಂಚಿಕೊಂಡಿರುವ ಅವರು, ಆ ಸಮಯದಲ್ಲಿ ಹರಡಿದ ವದಂತಿಗಳು ಮತ್ತು ಊಹಾಪೋಹಗಳ ಮೇಲೆ ತಮಗೆ ಯಾವುದೇ ನಿಯಂತ್ರಣವಿರಲಿಲ್ಲ ಎಂದು ಹೇಳಿದ್ದಾರೆ. ಕಲಾವಿದರಾಗಿ ತಾವು ಸಾವಿರಾರು ಜನರನ್ನು ಭೇಟಿಯಾಗುತ್ತೇವೆ. ಪ್ರತಿಯೊಬ್ಬರನ್ನೂ ಸಮಾನವಾಗಿಯೇ ಕಾಣಬೇಕಾಗುತ್ತದೆ. ಅಂದು ತಮ್ಮ ಜೊತೆಯಲ್ಲಿ ಅನೇಕ ಜನರಿದ್ದರು. ಯಾರನ್ನು ಮಾತನಾಡಿಸಬೇಕು, ಯಾರಿಂದ ದೂರವಿರಬೇಕು ಎಂದು ನಿರ್ಧರಿಸಲು ಸಾಧ್ಯವಾಗದ ಕ್ಷಣ ಅದಾಗಿತ್ತು. ಶಾರ್ಜಾದಲ್ಲಿ ನಡೆದ ಕ್ರಿಕೆಟ್ ಪಂದ್ಯ ವೀಕ್ಷಿಸಲು ತೆರಳಿದಾಗ ತೆಗೆದ ಆ ಒಂದು ಛಾಯಾಚಿತ್ರ ತಮ್ಮ ಜೀವನವನ್ನೇ ಬದಲಾಯಿಸಿತು ಎಂದು ಅವರು ವಿವರಿಸಿದ್ದಾರೆ.
ಆ ಫೋಟೋ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ಭಾರಿ ವಿವಾದ ಸೃಷ್ಟಿಯಾಯಿತು. ಈ ಘಟನೆಯು ತಮ್ಮ ಸಿನಿಮಾ ವೃತ್ತಿಜೀವನದ ಮೇಲೆ ತೀವ್ರವಾದ ಕೆಟ್ಟ ಪರಿಣಾಮ ಬೀರಿತು ಎಂದು ಮಂದಾಕಿನಿ ಬೇಸರ ವ್ಯಕ್ತಪಡಿಸಿದ್ದಾರೆ. ತಾವೆಲ್ಲೇ ಹೋದರೂ ಆ ವದಂತಿಗಳನ್ನು ಸತತವಾಗಿ ನಿರಾಕರಿಸಿದರೂ ಜನರು ನಂಬುವ ಸ್ಥಿತಿಯಲ್ಲಿರಲಿಲ್ಲ. ಆ ಕಾಲದಲ್ಲಿ ಇಂತಹ ಸೂಕ್ಷ್ಮ ವಿಚಾರಗಳನ್ನು ನಿರ್ವಹಿಸಲು ಮತ್ತು ಸಾರ್ವಜನಿಕ ಸಂಪರ್ಕವನ್ನು ನೋಡಿಕೊಳ್ಳಲು ವೃತ್ತಿಪರ ತಂಡಗಳ ಅಗತ್ಯವಿತ್ತು ಎಂಬುದು ತಮಗೆ ತಡವಾಗಿ ಅರಿವಾಯಿತು ಎಂದು ಅವರು ತಿಳಿಸಿದ್ದಾರೆ.
ಖ್ಯಾತ ನಿರ್ದೇಶಕ ರಾಜ್ ಕಪೂರ್ ಅವರ ನಿರ್ದೇಶನದ ರಾಮ್ ತೇರಿ ಗಂಗಾ ಮೈಲಿ ಚಿತ್ರದ ಮೂಲಕ ಮಂದಾಕಿನಿ ರಾತ್ರೋರಾತ್ರಿ ದೇಶಾದ್ಯಂತ ಖ್ಯಾತಿ ಗಳಿಸಿದ್ದರು. 1980 ರ ದಶಕದಲ್ಲಿ ಹಿಂದಿ ಚಿತ್ರರಂಗದ ಪ್ರಮುಖ ತಾರೆಯಾಗಿ ಹೊರಹೊಮ್ಮಿದ ಅವರು, ತಮ್ಮ ವೃತ್ತಿಜೀವನದಲ್ಲಿ 75 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅನಿಲ್ ಕಪೂರ್, ಮಿಥುನ್ ಚಕ್ರವರ್ತಿ ಹಾಗೂ ಗೋವಿಂದ ಸೇರಿದಂತೆ ಅಂದಿನ ಮುಂಚೂಣಿ ನಾಯಕರ ಜತೆ ತೆರೆ ಹಂಚಿಕೊಂಡಿದ್ದ ಅವರು, ದಾವೂದ್ ಜತೆಗಿನ ವಿವಾದದ ನಂತರ ಚಿತ್ರರಂಗದಲ್ಲಿ ಹಿನ್ನಡೆ ಅನುಭವಿಸಬೇಕಾಯಿತು.